ರಾಜ್ಯ

ಕೆಪಿಟಿಸಿಎಲ್ ನೇಮಕಾತಿ ರದ್ದು: ನೊಂದ ಅಭ್ಯರ್ಥಿಗಳಿಂದ ಹೋರಾಟ ಆರಂಭ

Manjula VN

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಎಇಇ, ಎಇ, ಮತ್ತು ಜೆಇ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ರದ್ದು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ನೊಂದ ಅಭ್ಯರ್ಥಿಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರದಿಂದ 2 ದಿನಗಳ ಕಾಲ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ. 

ಅಧಿವೇಶನ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿ, ಸರ್ಕಾರ ಈ ಕೂಡಲೇ ಕೆಪಿಟಿಸಿಎಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕು, ನೇರ ನೇಮಕಾತಿಗೆ ಆಡಳಿತಾತ್ಮಕ ಹಾಗೂ ಆರ್ಥಿಕ ಕೊರತೆ, ನೆರೆ ಪ್ರವಾಹ, ಕೋವಿಡ್ ನೆಪ ಹೇಳಲಾಗುತ್ತಿದೆ ಎಂದು ಆರೋಪಿಸಿದರು. 

ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಮಾಡಿರುವ ಬೆಂಗಳೂರು ನಿವಾಸಿ ಚಂದ್ರಿಕಾ ಅವರು ಮಾತನಾಡಿ, ಜೆಇ ಹಾಗೂ ಎಇ ಪೋಸ್ಟ್ ಎರಡಕ್ಕೂ ಅರ್ಜಿ ಸಲ್ಲಿಸಲಾಗಿತ್ತು. ಕಳೆದ ವರ್ಷ ನೀಡಿದ್ದ ಮಾಹಿತಿ ಮೇರೆಗೆ ನಾನು ಅತ್ಯಂತ ಗಂಭೀರವಾಗಿ ಓದಲು ಆರಂಭಿಸಿದ್ದೆ. ತರಬೇತಿ ತರಗತಿಗಳಿಗೂ ಹೋಗಿದ್ದೆ. ಇದೀಗ ಏಕಾಏಕಿ ನೇಮಕಾತಿ ರದ್ದು ಮಾಡಿರುವ ಆದೇಶ ನನ್ನ ಸಿದ್ಧತೆಗಳು ಸಂಪೂರ್ಣ ವ್ಯರ್ಥವಾಗುವಂತೆ ಮಾಡಿದೆ ಎಂದು ತಿಳಿಸಿದ್ದಾರೆ. 

ಪದವೀಧರರಾಗಿರುವ ಮಂಡ್ಯ ಮೂಲದ ಸೂರ್ಯ ಎಂಬುವವರು ಮಾತನಾಡಿ, ಸಾಕಷ್ಟು ಆಕಾಂಕ್ಷಿಗಳು ಹಣವನ್ನು ಖರ್ಚು ಮಾಡಿದ್ದಾರೆ, ತರಬೇತಿ ಕೇಂದ್ರಗಳಿಗೆ ಸೇರ್ಪಡೆಗೊಂಡು ತರಬೇತಿ ಪಡೆದುಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಸರ್ಕಾರ ಇಂತಹ ನಿರ್ಧಾರ ಕೈಗೊಂಡರೆ ಹೇಗೆ? ಮಂಗಳವಾರ ನಾವು ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಲಿದ್ದೇವೆ. ಅವರಿಂದ ಬೆಂಬಲ ಪಡೆಯಲು ಯತ್ನಿಸುತ್ತೇವೆಂದು ಹೇಳಿದ್ದಾರೆ. 

SCROLL FOR NEXT