ರಾಜ್ಯ

ಕರ್ನಾಟಕದ ಮೇಲೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಏಕೆ: ಸಿದ್ದರಾಮಯ್ಯ 

Sumana Upadhyaya

ಬೆಂಗಳೂರು: ಇಡೀ ರಾಜ್ಯ ಇನ್ನೂ ನೆರೆ ಪ್ರವಾಹದಿಂದ ಪುನಶ್ಚೇತನಗೊಳ್ಳಬೇಕಾದರೆ ಸರ್ಕಾರ ಮಾತ್ರ ನಿಗಮ, ಮಂಡಳಿಗಳಿಗೆ ನೇಮಕಾತಿ ಮಾಡಿಕೊಳ್ಳುವುದರಲ್ಲಿ, ಅನಗತ್ಯ ಖರ್ಚು ಮಾಡುವುದರಲ್ಲಿ ನಿರತವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸರ್ಕಾರದ ಖಜಾನೆಯಲ್ಲಿ ಹಣಕಾಸಿನ ಕೊರತೆಯಿದೆ ಎಂದು ಒಂದೆಡೆ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಮತ್ತು 25 ಮಂದಿ ಬಿಜೆಪಿ ಸಂಸದರು ಕೇಂದ್ರದಿಂದ ಹಣ ಕೇಳುವ ಉತ್ಸಾಹದಲ್ಲಿ ಇದ್ದಾರೆ ಎಂದು ಕಾಣುತ್ತಿಲ್ಲ ಎಂದು ಸಹ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕರ್ನಾಟಕದಲ್ಲಿ ಈ ಬಾರಿ ಮೂರು ಬಾರಿ ಪ್ರವಾಹ ಬಂದು ಅಪಾರ ಪ್ರಮಾಣದಲ್ಲಿ ನಷ್ಟವಾದರೂ ಕೂಡ ಅಂದಾಜು 24 ಸಾವಿರ ಕೋಟಿ ರೂಪಾಯಿ ನಷ್ಟವಾದರೂ ರಾಜ್ಯಕ್ಕೆ ಕೇಂದ್ರದಿಂದ ಸಿಕ್ಕಿದ್ದು ಕೇವಲ 577 ಕೋಟಿ ರೂಪಾಯಿ, ಕಳೆದ ವರ್ಷ ಸುಮಾರು 35 ಸಾವಿರ ಕೋಟಿ ರೂಪಾಯಿ ನಷ್ಟವುಂಟಾಗಿತ್ತು, ಆದರೆ ಸಿಕ್ಕಿದ್ದು ಕೇವಲ 1,677 ಕೋಟಿ ರೂಪಾಯಿ. ಪಶ್ಚಿಮ ಬಂಗಾಳದಲ್ಲಿ ಸದ್ಯದಲ್ಲಿಯೇ ಚುನಾವಣೆ ನಡೆಯಲಿದೆ, ಹೀಗಾಗಿ ಕೇಂದ್ರ ಸರ್ಕಾರ ಆ ರಾಜ್ಯಕ್ಕೆ 2,707 ಕೋಟಿ ರೂಪಾಯಿ ನೀಡಿದೆ. ಕರ್ನಾಟಕಕ್ಕೆ ಮಾತ್ರ ಏಕೆ ಈ ಮಲತಾಯಿ ಧೋರಣೆ ಎಂದು ಅವರು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ರಾಜ್ಯದ 19 ಜಿಲ್ಲೆಗಳ 123 ತಾಲ್ಲೂಕುಗಳಲ್ಲಿ ಬರಗಾಲ ಬಂದಿತ್ತು. ಈ ವರ್ಷ 25 ಜಿಲ್ಲೆಗಳ 180 ತಾಲ್ಲೂಕುಗಳಲ್ಲಿ ನೆರೆ, ಪ್ರವಾಹ ಉಂಟಾಗಿದೆ. ಕೋವಿಡ್-19ನಿಂದಾಗಿ ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಹಳ್ಳಿ, ಪಟ್ಟಣಗಳಿಗೆ ಹಿಂತಿರುಗಿ ಕೃಷಿ ಮಾಡುತ್ತಿದ್ದಾರೆ. ಆದರೆ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಬೆಳೆದ ಬೆಳೆಗಳು ಕೈಗೆ ಸಿಕ್ಕಿಲ್ಲ ಎಂದು ಹೇಳಿದರು.

ಜಿಎಸ್ ಟಿಗೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಹಣ ನೀಡುತ್ತಿದೆ. ಆದರೆ ಅದಕ್ಕೆ ತಕ್ಕಂತೆ ರಾಜ್ಯಕ್ಕೆ ಧನಸಹಾಯ ಸಿಗುತ್ತಿಲ್ಲ. ಹಣಕಾಸು ಆಯೋಗದ ಶಿಫಾರಸಿನಂತೆ, 5,495 ಕೋಟಿ ರೂಪಾಯಿ ಕರ್ನಾಟಕಕ್ಕೆ ಬರಬೇಕಿದೆ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅದನ್ನು ನಿಲ್ಲಿಸಿದ್ದಾರೆ. ಜಿಎಸ್ ಟಿ ಪರಿಹಾರ ನಿಧಿ ಬರುವುದು, ಅದನ್ನು ಕೇಳುವುದು ನಮ್ಮ ಹಕ್ಕು. ಅದನ್ನು ಕೇಳಲು ಸರ್ಕಾರದಲ್ಲಿರುವ ನಿಮಗೆ ಯಾರಿಗೂ ಧೈರ್ಯವಿಲ್ಲವೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

SCROLL FOR NEXT