ರಾಜ್ಯ

ರಾಜ್ಯದಲ್ಲಿ ಅರೋಮಾಥೆರಪಿ ಪ್ರಯೋಗಾಲಯ ಪ್ರಾರಂಭಕ್ಕೆ ಸಕಲ ಸಿದ್ದತೆ

Raghavendra Adiga

ಬೆಂಗಳೂರು: ದೇಶದ 600 ಕ್ಕೂ ಹೆಚ್ಚು ಬ್ರಾಂಡ್‌ಗಳ ತಯಾರಕರಿಗೆ ಫೆಸಿಲಿಟೇಟರ್ ಆಗಿರುವ ಬೆಂಗಳೂರು ಮೂಲದ ಅಖಿಲ ಭಾರತ ಅಗರಬತ್ತಿ ತಯಾರಕರ ಸಂಘವು ಕರ್ನಾಟಕದಲ್ಲಿ ಅರೋಮಾಥೆರಪಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯವನ್ನು ಸ್ಥಾಪಿಸಲು ಮುಂದಾಗಿದೆ.

ಅಖಿಲ ಭಾರತ ಅಗರಬತ್ತಿ ತಯಾರಕರ ಸಂಘದ  ಅಧ್ಯಕ್ಷ ಅರ್ಜುನ್ ರಂಗ ಟಿಎನ್‌ಐಇಗೆ ಈ ಕುರಿತು ತಿಳಿಸಿದ್ದು ಸಾರ್ವಜನಿಕರ ಆರೋಗ್ಯದ ಮೇಲೆ ವಾಸನೆ ಯಾವ ಬಗೆಯ ಪರಿಣಾಮ ಬೀರಲಿದೆ ಎನ್ನುವುದನ್ನು ಅಧ್ಯಯನ ಮಾಡುವ ಸಲುವಾಗಿ ಲ್ಯಾಬ್ ಅನ್ನು ರಾಜ್ಯ ರಾಜಧಾನಿ ಬೆಂಗಳುರಿನಲ್ಲಿ ಸ್ಥಾಪಿಸಲಾಗುತ್ತದೆ ಎಂದರು.

ಅಗರಬತ್ತಿಯ ತುಂಡುಗಳಲ್ಲಿನ ಪ್ರಮುಖ ಪದಾರ್ಥಗಳಲ್ಲಿ ಒಂದಾದ ಜಾಕ್ಸ್ ಪುಡಿಯನ್ನು ಸ್ಥಳೀಯವಾಗಿ ತಯಾರಿಸಲು ತೋಟಗಳನ್ನು ಸ್ಥಾಪಿಸುವ ಯೋಜನೆ ಹೊಂದಿದ್ದು ಇದನ್ನು ಸುಮಾರು 10 ಅಡಿ ಎತ್ತರದ ಪೊದೆಸಸ್ಯವಾದ ಲಿಥಿಯಾ ಸಸ್ಯದ ತೊಗಟೆಯಿಂದ ತೆಗೆಯಲಾಗುತ್ತದೆ. ಲಿಥಿಯಾವನ್ನು ಬೆಳೆಸಲು ರೈತರು ಹಾಗೂ ವಿವಿಧ ರಾಜ್ಯಗಳ ಅರಣ್ಯ ಇಲಾಖೆಗಳೊಂದಿಗೆ ಮಾತುಕತೆ ನಡೆಯುತ್ತಿದೆ, ಇದನ್ನು ಮಣ್ಣಿನ ಸವೆತವನ್ನು ತಡೆಗಟ್ಟಲು ಹೊಲಗಳಿಗೆ ಅಥವಾ ನದಿ ತೀರಗಳಲ್ಲಿ ಬೇಲಿಯ ಬೆಳೆಯಾಗಿ ಬೆಳೆಯಬಹುದು. ಒಮ್ಮೆ ಬೆಳೆ ಕೊಯ್ದಾದ ನಂತರ ಪೊದೆಗಳನ್ನು ಉರುವಲಾಗಿಯೂ ಬಳಸಬಹುದು ಎಂದು ಅರ್ಜುನ್ ಹೇಳಿದರು.

ಸಂಘವು ಮೂರು ಕೃಷಿ ವಿಶ್ವವಿದ್ಯಾಲಯಗಳೊಂದಿಗೆ ಸಂಪರ್ಕದಲ್ಲಿದ್ದು ರೈತರನ್ನು ಗುರುತಿಸುವ ಕೆಲಸ ಈಗಾಗಲೇ ಅಸ್ಸಾಂನಲ್ಲಿ ಪ್ರಾರಂಬವಾಗಿದೆ. ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಅರಣ್ಯ ಇಲಾಖೆಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಕನಿಷ್ಠ, 50% ಅಗರಬತ್ತಿ ತಯಾರಕರು ಕರ್ನಾಟಕದಲ್ಲಿ ನೆಲೆಸಿದ್ದಾರೆ ಮತ್ತು ಕಾರ್ಮಿಕರು ಹೆಚ್ಚಾಗಿರುವ ಈ ಉದ್ಯಮದಲ್ಲಿ ಸುಮಾರು 5 ಲಕ್ಷ ಕಾರ್ಮಿಕರ ಪೈಕಿ 90% ಮಹಿಳೆಯರಿದ್ದಾರೆ. ಸಾಂಕ್ರಾಮಿಕದ ಸಮಯದಲ್ಲಿಯೂ ಅಗರಬತ್ತಿ ಉದ್ಯಮವು ಚೇತರಿಸಿಕೊಳ್ಳುತ್ತಿದೆ. ದೇವಾಲಯಗಳು ಇನ್ನೂ ಸಾಮಾನ್ಯ ಸ್ಥಿತಿಗೆ ಮರಳದಿದ್ದರೂ ಸಹ, ಲಾಕ್‌ಡೌನ್ ಸಮಯದಲ್ಲಿ ಮನೆಗಳಲ್ಲಿ ಅಗರಬತ್ತಿಯ ಬೇಡಿಕೆ ಸ್ಥಿರವಾಗಿತ್ತು. ಸಾಂಕ್ರಾಮಿಕ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳು ಅಗರಬತ್ತಿಯ ಉಪಯೋಗಗಳನ್ನು ಜನಪ್ರಿಯಗೊಳಿಸಿದ ನಂತರ ಸಾಂಬ್ರಾಣಿಯಂತಹ ಸಾಂಪ್ರದಾಯಿಕ ಸುಗಂಧಕ್ಕೆ ಬೇಡಿಕೆ ಹೆಚ್ಚಿತ್ತು,

ರಾಜ್ಯ ಅರಣ್ಯ ಇಲಾಖೆ ಉತ್ತರ ಕರ್ನಾಟಕ, ಶಿವಮೊಗ್ಗ ಮತ್ತು ಭದ್ರಾ ಮೀಸಲು ಪ್ರದೇಶಗಳಲ್ಲಿನ ತೋಟಗಳನ್ನು ಗಮನಿಸಿದ್ದು ಅಲ್ಲಿ 1.3 ಸೆಂಟ್ಸ್ ಭೂಮಿಯನ್ನು ಹೊಂದಿರುವ ಸಣ್ಣ ರೈತರು ಕೃಷಿ ಮಾಡಲು ಒಪ್ಪಂದ ರೂಪಿಸಲಾಗುತ್ತದೆ. ಇದರಿಂದಾಗಿ ಬೆಳೆಗಳನ್ನು ಕೈಗಾರಿಕೆಗಳಿಗೆ ಮಾರಾಟ ಮಾಡಬಹುದು. ಉದ್ಯಮಿಗಳು ಸಂಸ್ಕರಣಾ ಕೇಂದ್ರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೆಲ ಅಂದಾಜಿನಂತೆ ಉದ್ಯಮದ ಚಿಲ್ಲರೆ ಮೌಲ್ಯ7,000 ಕೋಟಿ ರೂ. ಮತ್ತು ರಫ್ತುಗಳ ವ್ಯವಹಾರ ಸುಮಾರು 900 ಕೋಟಿ ರೂ. ಇರಲಿದೆ ಎಂದು ಅರ್ಜುನ್ ಹೇಳಿದ್ದಾರೆ. 

SCROLL FOR NEXT