ಬೆಂಗಳೂರು: ಸ್ಯಾಂಡಲ್ವುಡ್ ಮಾದಕ ಜಾಲ ಪ್ರಕರಣದಲ್ಲಿ ಸಿಲುಕಿರುವ ನಟಿ ಸಂಜನಾ ಗರ್ಲಾನಿಗೆ ಇತ್ತೀಚೆಗೆ ಜಾಮೀನು ಸಿಕ್ಕ ಬೆನ್ನಲ್ಲೇ, ನಟಿ ರಾಗಿಣಿ ದ್ವಿವೇದಿ ಅವರ ಪೋಷಕರು ಇಂದು ನಗರ ಆಯುಕ್ತರ ಕಚೇರಿಯಲ್ಲಿರುವ ಸಿಸಿಬಿ ಜಂಟಿ ಆಯುಕ್ತರ ಕಚೇರಿಗೆ ತೆರಳಿ ಚರ್ಚಿಸಿದರು.
ರಾಗಿಣಿ ತಂದೆ ರಾಕೇಶ್ ಹಾಗೂ ತಾಯಿ ರೋಹಿಣಿ ಅವರು ಸಂಜನಾಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ತನಿಖೆಯ ಮಾಹಿತಿ ಪಡೆಯಲು ಆಗಮಿಸಿದ್ದರು.
ತನಿಖೆಯಲ್ಲಿ ಏನಾದರೂ ಸಮಸ್ಯೆ ಆಗಿದೀಯಾ? ಸಂಜನಾಗೆ ಹೇಗೆ ಜಾಮೀನು ಸಿಕ್ಕಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಆರೋಗ್ಯ ಸಮಸ್ಯೆಯಿಂದಾಗಿ ಸಂಜಾನೆಗೆ ಜಾಮೀನು ದೊರೆತಿದ್ದು, ಈ ವಿಚಾರದಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಎನ್ಡಿಪಿಎಸ್ ಕೋರ್ಟ್, ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾ ಆಗಿದ್ದು, ರಾಗಿಣಿ ಅವರು ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ತಮ್ಮ ಪುತ್ರಿಗೆ ಜಾಮೀನು ಕೊಡಿಸಲು ರಾಗಿಣಿ ಪೋಷಕರು ಪ್ರಯತ್ನ ಮುಂದುವರೆಸಿದ್ದಾರೆ.