ರಾಜ್ಯ

ತುಮಕೂರು: ಗ್ರಾಮ ಪಂಚಾಯತ್ ಸೀಟುಗಳ ಹರಾಜು, ಮೂವರ ಬಂಧನ, 9 ಕೇಸು ದಾಖಲು 

Sumana Upadhyaya

ತುಮಕೂರು: ಗ್ರಾಮ ಪಂಚಾಯತ್ ಸೀಟುಗಳು ಹರಾಜು ಆಗುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿರುವ ಪೊಲೀಸರು ತುರುವೇಕೆರೆಯಲ್ಲಿ ಮೂವರನ್ನು ಬಂಧಿಸಿ ಕುಣಿಗಲ್, ಚೆಲ್ಲೂರು, ನೊಣವಿನಕೆರೆ ಮತ್ತು ತುರುವೇಕೆರೆ ಪೊಲೀಸ್ ಠಾಣೆಗಳಲ್ಲಿ 9 ಕೇಸುಗಳನ್ನು ದಾಖಲಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶ್ರೀನಿವಾಸ, ಸಿದ್ದೇಗೌಡ ಮತ್ತು ಹುಚ್ಚೇ ಗೌಡ ಎಂದು ಗುರುತಿಸಲಾಗಿದ್ದು ಅವರು ಕಣತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುದ್ದನಹಳ್ಳಿಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಕುಣಿಗಲ್ ತಾಲ್ಲೂಕಿನಲ್ಲಿ ಕಿಟ್ಟನಮಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಡುಮಟ್ಟಿಕೆರೆಯ ಜಯರಾಮ ಅವರು ಗ್ರಾಮ ಪಂಚಾಯತ್ ಸೀಟುಗಳ ಆಕಾಂಕ್ಷಿಗಳಿಗೆ ಬಿಡ್ಡಿಂಗ್ ಕರೆಯುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಕೇಸು ದಾಖಲಾಗಿದೆ.

ಈ ಅಕ್ರಮ ಬೆಳಕಿಗೆ ಬಂದ ನಂತರ ಲಕ್ಷ್ಮಮ್ಮ ರಂಗನಾಥ್ ಎಂಬುವವರು ಮಾತ್ರ ಸದ್ಯ ಕಣದಲ್ಲಿದ್ದು,ಆಕೆಯ ಪತಿ 11.75 ಲಕ್ಷ ರೂಪಾಯಿಗಳ ಬಿಡ್ಡಿಂಗ್ ನಲ್ಲಿ ಸೀಟು ಗೆದ್ದು ಉಳಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಗ್ರಾಮದ ಇತರರಾದ ಬಿಡ್ಡಿಂಗ್ ನಲ್ಲಿ ಅಕ್ರಮವಾಗಿ ತೊಡಗಿಸಿಕೊಂಡಿದ್ದರು ಎನ್ನಲಾದ ಮಂಜುನಾಥ್, ರಂಗನಾಥ ಮಗದಯ್ಯ ಮತ್ತು ನಾಗರಾಜು ಅವರ ವಿರುದ್ಧ ಕೂಡ ಕೇಸು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತುರುವೆಕೆರೆ ತಾಲ್ಲೂಕಿನ ಮಾವಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ಕೆಲವು ಸೀಟುಗಳನ್ನು 37.5 ಲಕ್ಷ ರೂಪಾಯಿಗೆ ಹರಾಜು ಹಾಕಲಾಗಿದ್ದು, ಗುಬ್ಬಿ ತಾಲ್ಲೂಕಿನ ಬಿಡಾರೆ ಗ್ರಾಮ ಪಂಚಾಯತಿ ಅಡಿಯಲ್ಲಿ ಗುಡ್ಡದಹಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಮೀಸಲಿಟ್ಟಿದ್ದ ಸ್ಥಾನವನ್ನು 3.75 ಲಕ್ಷ ರೂಪಾಯಿಗೆ ಹರಾಜು ಮಾಡಲಾಗಿದೆ ಎಂದು ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಎರಡನೇ ಹಂತದಡಿ ಡಿಸೆಂಬರ್ 27 ರಂದು ಮತದಾನಕ್ಕೆ ತೆರಳುತ್ತಿರುವ ಅನಪನಹಳ್ಳಿ ಮತ್ತು ಅಲ್ಬುರು ಗ್ರಾಮಗಳಲ್ಲಿ ಸೀಟುಗಳನ್ನು ಹರಾಜು ಹಾಕಲು ಜನರ ಗುಂಪೊಂದು ಪ್ರಯತ್ನಿಸಿದೆ ಎಂದು ತಿಪಟೂರು ತಾಲ್ಲೂಕಿನ ನೊಣವಿನಕೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

SCROLL FOR NEXT