ರಾಜ್ಯ

ಎಪಿಎಂಸಿ ವಿಧೇಯಕವನ್ನು ಸಮಗ್ರವಾಗಿ ನೋಡುವ ಅಗತ್ಯವಿದೆ: ರೈತರು 

Sumana Upadhyaya

ಬೆಂಗಳೂರು: ಕೃಷಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಎರಡು ತಿದ್ದುಪಡಿಗಳಿಗೆ ರಾಜ್ಯಾದ್ಯಂತ ರೈತರು ಪ್ರತಿಭಟನೆ ಮಾಡುತ್ತಿರಬಹುದು, ಆದರೆ ಹತ್ತಿರದಿಂದ ನೋಡಿದವರು ಹೇಳುವ ಪ್ರಕಾರ, ರೈತರು ಮತ್ತು ವ್ಯಾಪಾರಿಗಳ ನಡುವಿನ ಬಾಂಧವ್ಯ ಹಾಗೂ ಮಂಡಿಗಳ ಕಾರ್ಯವೈಖರಿಯ ಬಗ್ಗೆ ಸರ್ಕಾರದಲ್ಲಿ ಸಮಗ್ರ ವಿಧಾನ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಆಗ ಮಾತ್ರ ಕೃಷಿ ಸಮುದಾಯದಲ್ಲಿ ಬೆಳವಣಿಗೆ ಮತ್ತು ಸಮೃದ್ಧಿ ನಡೆಯಲಿದೆ ಎಂಬ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಭೂ ಸುಧಾರಣೆ(ತಿದ್ದುಪಡಿ) ವಿಧೇಯಕ 2020 ಮತ್ತು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ(ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ 2020ನ್ನು ಜಾರಿಗೆ ತಂದಿದೆ. ಆದರೆ ಮಂಡಿಗಳು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಕಾರ್ಯವೈಖರಿ ಬಗ್ಗೆ ರೈತರಲ್ಲಿ ವಿಭಿನ್ನ ನಿಲುವು, ಅಭಿಪ್ರಾಯಗಳಿವೆ. ಹೀಗಾಗಿ ಒಂದು ಮಂಡಿಯ ಬಗ್ಗೆ ರೈತರಲ್ಲಿ ಖುಷಿಯಿದ್ದರೆ, ಮತ್ತೊಂದು ಮಂಡಿ ಬಗ್ಗೆ ಬೇಸರ, ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಳೆದ ಶುಕ್ರವಾರ ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ ಕಿಸಾನ್ ಸಮ್ಮಾನ್ ದಿವಸ್ ನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರೈತರನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭವಿಷ್ಯ ಮಧ್ಯವರ್ತಿಗಳಿಂದಾಗಿ ಹಾಳಾಗುತ್ತಿದೆ ಎಂದು ಆರೋಪಿಸಿದರು. ಅವರಲ್ಲೊಬ್ಬ ರೈತ ಚನ್ನರಾಯಪಟ್ಟಣದ ರಂಗೇ ಗೌಡ ಎಂಬುವವರು, ರೈತರ ಬೆಳೆಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳನ್ನು ತೆಗೆದುಹಾಕದಿದ್ದರೆ ರೈತರು ಉದ್ಧಾರವಾಗುವುದಿಲ್ಲ. ಮಧ್ಯವರ್ತಿಗಳು ನಮ್ಮ ಬೆಲೆ ನಿಗದಿಪಡಿಸುತ್ತಿದ್ದಾರೆ. ಅವರು ನಮ್ಮಿಂದ ಹೆಚ್ಚು ಹಣ ಮಾಡುತ್ತಿದ್ದಾರೆ. ಮಧ್ಯವರ್ತಿಗಳಿಲ್ಲದೆ ಯಾವ ರೈತರೂ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ.

ಎಪಿಎಂಸಿಯಲ್ಲಿ ಸರ್ಕಾರವು ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಮಾರಾಟ ಮಾಡುವುದಕ್ಕಿಂತ ಮುಕ್ತ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಮಧ್ಯವರ್ತಿಗಳ ಸಹಾಯವನ್ನು ಪಡೆಯುವುದು ರೈತರಿಗೆ ಹೆಚ್ಚು ಸಂಭಾವನೆ ನೀಡುತ್ತದೆ. ಎಪಿಎಂಸಿಗಳ ಪರಿಕಲ್ಪನೆಯು ಶಿವಮೊಗ್ಗ, ಹುಬ್ಬಳ್ಳಿ ಮತ್ತು ತುಮಕೂರು ಮುಂತಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವ್ಯವಸ್ಥೆಯಲ್ಲಿ ಕೆಲಸ ಮಾಡಿದ ಅನೇಕರು ಹೇಳುತ್ತಾರೆ, ಆದರೆ ಉಡುಪಿಯಲ್ಲಿ, ರೈತರು ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಹೆಚ್ಚು ಲಾಭದಾಯಕವೆಂದು ಹೇಳುತ್ತಾರೆ.

ಇದಕ್ಕಾಗಿಯೇ ಉಡುಪಿಯಲ್ಲಿ ಎಪಿಎಂಸಿಯ ವಾರ್ಷಿಕ ವಹಿವಾಟು 2.5 ಕೋಟಿ ರೂಪಾಯಿಗಳಿದ್ದು, ಶಿವಮೊಗ್ಗದಲ್ಲಿ ಇದು 30 ಕೋಟಿ ರೂಪಾಯಿಗಳಿವೆ. ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ ಮತ್ತು ಮೆಣಸು ಬೆಳೆಯುವ ಹೆಚ್ಚಿನ ಬೆಳೆಗಾರರು ಸ್ಥಳೀಯ ನಿವಾಸಿಗಳಾದ ಮಧ್ಯವರ್ತಿಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ಎಪಿಎಂಸಿಯನ್ನು ಸಂಪರ್ಕಿಸದೆ ಅವರಿಗೆ ಮಾರಾಟ ಮಾಡುತ್ತಾರೆ.
ಸರ್ಕಾರ ಬೆಂಬಲ ಬೆಲೆ ತರುವ ಮೊದಲೇ ಇಲ್ಲಿನ ರೈತರು ತಮ್ಮ ಉತ್ಪನ್ನಗಳು ಉತ್ತಮ ಬೆಲೆಗೆ ಮಾರಾಟವಾಗಿ ಹೋಗಲು ಬೇರೆ ಉಪಾಯವನ್ನು ಕಂಡುಕೊಂಡಿದ್ದರು ಎನ್ನುತ್ತಾರೆ ಉಡುಪಿಯ ಎಪಿಎಂಸಿಯ ಮಾಜಿ ಅಧ್ಯಕ್ಷ ಕೆ ಶಾಮಪ್ರಸಾದ್ ಭಟ್.

ಹೊಸ ಕೃಷಿ ಕಾನೂನುಗಳು ಕಾರ್ಪೊರೇಟ್‌ಗಳಿಗೆ ಮುಕ್ತ ಕೈ ನೀಡುತ್ತವೆ. “ಅವರು ರೈತರಿಂದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸುತ್ತಾರೆ, ಸಂಗ್ರಹಿಸುತ್ತಾರೆ ಮತ್ತು ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ರೈತರು ಮಧ್ಯವರ್ತಿಗಳ ಹಿಡಿತದಿಂದ ಮುಕ್ತರಾಗುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ ಮಧ್ಯವರ್ತಿಗಳು ರೈತರ ಮಕ್ಕಳು ಎನ್ನುತ್ತಾರೆ ದಕ್ಷಿಣ ಕನ್ನಡ ರಾಜ್ಯ ರೈತ ಸಂಘದ ರೂಪೇಶ್ ರೈ.

SCROLL FOR NEXT