ರಾಜ್ಯ

ಅಬಕಾರಿ ಇಲಾಖೆ ಸಿಬ್ಬಂದಿಗೆ ಗುಡ್ ನ್ಯೂಸ್! ಶೀಘ್ರವೇ ವೇತನ ಹೆಚ್ಚಳಕ್ಕೆ ಪ್ರಸ್ತಾಪ: ಸಚಿವ ಎಚ್.ನಾಗೇಶ್

Raghavendra Adiga

ಬೆಂಗಳೂರು: ರಾಘವೇಂದ್ರ ಔರಾದ್ಕರ್ ಸಮಿತಿಯ ಶಿಫಾರಸುಗಳ ಪ್ರಕಾರ ವೇತನ ಹೆಚ್ಚಳ ಪಡೆದ ಹೆಚ್ಚಿನ ಪೊಲೀಸ್ ಸಿಬ್ಬಂದಿ ಈಗ ಹೆಚ್ಚಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇತ್ತ ಅಬಕಾರಿ ಇಲಾಖೆ ಪೊಲೀಸ್ ಇಲಾಖೆಗೆ ಸಮನಾಗಿ ವೇತನ ಪರಿಷ್ಕರಣೆ ಮಾಡುವ ಪ್ರಸ್ತಾಪ ಇಟ್ಟಿದೆ, ಈ ಸಂಬಂಧ ಶೀಘ್ರದಲ್ಲೇ ತಜ್ಞರ ಸಮಿತಿ ರಚಿಸಲಾಗುವುದು ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಪತ್ರಿಕೆಗೆ ತಿಳಿಸಿದರು.

"ಸಮಿತಿಯು ನಮ್ಮ (ಅಬಕಾರಿ) ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಯ ವೇತನ ರಚನೆಯನ್ನು ಅಧ್ಯಯನ ಮಾಡುತ್ತದೆ. ನೆರೆಯ ರಾಜ್ಯಗಳ ಅಬಕಾರಿ ವಿಭಾಗದ ಸಿಬ್ಬಂದಿಗೆ ನೀಡಲಾಗುವ ಸಂಬಳದ ವಿವರಗಳನ್ನು ಸಹ ಪರಿಗಣಿಸಲಾಗುವುದು. ವರದಿ ಸಿದ್ಧವಾದ ನಂತರ, ನಾವು ಅದನ್ನು ವೇತನ ಆಯೋಗಕ್ಕೆ ಕಳುಹಿಸುತ್ತೇವೆ. ಇದು ಶೀಘ್ರದಲ್ಲೇ ಆಗಲಿದೆ, ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಕ್ಯಾಬಿನೆಟ್ ಸಹ ಶಿಫಾರಸುಗಳನ್ನು ಅನುಮೋದಿಸುತ್ತದೆ ಎಂಬ ಭರವಸೆ ಇದೆ" ಸಚಿವರು ಹೇಳಿದ್ದಾರೆ.

ಅಬಕಾರಿ ಮತ್ತು ಪೊಲೀಸ್ ಸಿಬ್ಬಂದಿ ಮಾಡುವ ಕೆಲಸದ ಸ್ವರೂಪವನ್ನು ಆಧರಿಸಿ ಅಬಕಾರಿ ಸಿಬ್ಬಂದಿಗೆ ವೇತನ ಪರಿಷ್ಕರಣೆ ಶಿಫಾರಸು ಮಾಡಲಾಗುವುದು ಎಂದು ಅವರು ಹೇಳಿದರು. "ಪೊಲೀಸ್ ಮತ್ತು ಅಬಕಾರಿ ಇಲಾಖೆಯ ನಡುವಿನ ಕೆಲಸದ ಶ್ರೇಣಿಗಳು ಮತ್ತು ಸ್ವರೂಪಗಳು ಬಹುತೇಕ ಒಂದೇ ಬಗೆಯಲ್ಲಿದೆ. ಪೊಲೀಸರು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಮತ್ತು ಅಬಕಾರಿ ಸಿಬ್ಬಂದಿಗಳು ಸಹ ಬೆಳಗಿನಿಂದ ರಾತ್ರ್ವರೆಗೆ ದುಡಿಯುತ್ತಾರೆ. ಅವರು (ಪೊಲೀಸರು) ಗುಪ್ತಚರ ಮಾಹಿತಿ ಸಂಗ್ರಹಿಸುತ್ತಾರೆ ಮತ್ತು ಅಪರಾಧಗಳನ್ನು ಪತ್ತೆ ಮಾಡುತ್ತಾರೆ ಮತ್ತು ನಮ್ಮ ಸಿಬ್ಬಂದಿ ನಕಲಿ ಮದ್ಯ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿರುವ ಜನರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ದಾಳಿ ನಡೆಸುತ್ತಾರೆ. ಕೆಲಸದ ಸ್ವರೂಪ ಬಹುತೇಕ ಒಂದೇ ಆದರೆ ವೇತನದಲ್ಲಿ ಅಸಮಾನತೆಯಿದೆ. ನಾವು ಹೆಚ್ಚು ಕೇಳುವುದಿಲ್ಲ, ಆದರೆ ಪೊಲೀಸ್ ಸಿಬ್ಬಂದಿಗೆ ಸಮನಾಗಿ ಸಂಬಳ ನೀಡಲು ಶಿಫಾರಸು ಮಾಡುತ್ತೇವೆ ”ಎಂದು ಸಚಿವರು ವಿವರಿಸಿದರು.
 

SCROLL FOR NEXT