ರಾಜ್ಯ

ಬೆಂಗಳೂರು: ವಿಷ ಕುಡಿಯುವಂತೆ ಪತ್ನಿಗೆ ಒತ್ತಾಯ, ಪತಿಯ ವಿರುದ್ಧ ಪ್ರಕರಣ ದಾಖಲು

Nagaraja AB

ಬೆಂಗಳೂರು: ಪತಿ ಹಾಗೂ ಅತ್ತೆಯ ಬಲವಂತದಿಂದ  ಖಾಸಗಿ ನರ್ಸಿಂಗ್ ಕಾಲೇಜ್ ವೊಂದರಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದ ಮಹಿಳೆಯೊಬ್ಬರು ವಿಷ ಕುಡಿದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಜ್ಞಾನಭಾರತಿಯಲ್ಲಿ ನಡೆದಿದೆ. ಸಂತ್ರಸ್ತೆಯ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. 

ಸಂತ್ರಸ್ತೆಯನ್ನು 38 ವರ್ಷದ ಪಾವನ ಎಂದು ಗುರುತಿಸಲಾಗಿದೆ. ಮಂಡ್ಯ ಮೂಲದ ಪಾವನ, ಆರು ತಿಂಗಳ ಹಿಂದೆ ಪ್ರದೀಪ್ ಎಂಬವರನ್ನು ವಿವಾಹವಾಗಿದ್ದರು.ಈ ದಂಪತಿ ಮರಿಯಪ್ಪನಪಾಳ್ಯದಲ್ಲಿ ವಾಸವಾಗಿದ್ದರು. 42 ವರ್ಷದ ಪ್ರದೀಪ್ ಕೌಟುಂಬಿಕ ನ್ಯಾಯಾಲಯವೊಂದರಲ್ಲಿ ಶಿರಸ್ತೇದಾರ್ ಆಗಿದ್ದಾರೆ.

ಎರಡು ವಾರಗಳ ಹಿಂದೆ ಫೋಷಕರ ಮನೆಗೆ ಹೋಗಿದ್ದ ಪಾವನ ಬಂದಿರಲಿಲ್ಲ.ಭಾನುವಾರ ಪತಿ ಆಕೆಗೆ ಕರೆ ಮಾಡಿ, ವಾಪಸ್ ಬರುವಂತೆ ಹೇಳಿದ್ದಾರೆ. ನಂತರ ಆಕೆ ವಾಪಸ್ ಬಂದಾಗ ಪ್ರದೀಪ್ ಹಾಗೂ ಅವರ ಕುಟುಂಬ ಸದಸ್ಯರು ಪಾವನ ಮೇಲೆ ಹಲ್ಲೆ ನಡೆಸಿ, ವಿಷ ಕುಡಿಯುವಂತೆ ಒತ್ತಾಯಿಸಿರುವ ಆರೋಪ ಕೇಳಿಬಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯನ್ನು ಗಮನಿಸಿದ ನೆರೆಹೊರೆಯವರು ಪಾವನ ಅವರ ಫೋಷಕರಿಗೆ ಮಾಹಿತಿ ನೀಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಜ್ಞಾನಭಾರತಿ ಠಾಣೆಗೂ ದೂರು ನೀಡಿದ್ದಾರೆ.  ಈ ಘಟನೆಗೂ ಮುನ್ನ ಹುಟ್ಟಿದ ದಿನಾಂಕವನ್ನು ಮದುವೆಗೂ ಮುನ್ನ ತಪ್ಪಾಗಿ ನೀಡಲಾಗಿದೆ ಎಂದು ಆರೋಪಿಸಿ ಪ್ರದೀಪ್ ತಾಯಿ, ಪಾವನ ಜೊತೆಗೆ ಜಗಳವಾಡಿದ್ದಾರೆ. ಇದರಿಂದಾಗಿ ಬೇಸತ್ತು ಪಾವನ ತವರೂ ಮನೆಗೆ ಹೋಗಿದ್ದರು ಎನ್ನಲಾಗಿದೆ.

 ಪಾವನ ಕುಟುಂಬದವರ ಹೇಳಿಕೆ ಆಧಾರದ ಮೇಲೆ ಕೊಲೆ, ಕೌಟುಂಬಿಕ ಹಲ್ಲೆ ಪ್ರಕರಣವನ್ನು ಪ್ರದೀಪ್ ಹಾಗೂ ಅವರ ಕುಟುಂಬದವರ ವಿರುದ್ಧ ದಾಖಲಿಸಲಾಗಿದೆ. ಈ ಮಧ್ಯೆ ಪ್ರದೀಪ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
 

SCROLL FOR NEXT