ರಾಜ್ಯ

ಶ್ವಾಸಕೋಶದಲ್ಲಿ ಕೋವಿಡ್ ಮಾದರಿಯ ಗುರುತು ಪತ್ತೆ; ವೈದ್ಯರಿಂದ 2ನೇ ಅಲೆಯ ಎಚ್ಚರಿಕೆ

Srinivas Rao BV

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು, ಅದರಿಂದ ಉಂಟಾಗುತ್ತಿರುವ ಸಾವುಗಳು ಕಡಿಮೆಯಾಗುತ್ತಿರಬಹುದು ಆದರೆ ನಗರದ ಹಲವು ಆಸ್ಪತ್ರೆಗಳಲ್ಲಿ ವೈದ್ಯರು ತಮ್ಮ ಬಳಿ ಬರುವ ರೋಗಿಗಳಲ್ಲಿ ಶ್ವಾಸಕೋಶ, ಎದೆ ಭಾಗಗಳಲ್ಲಿ ಕೋವಿಡ್-19 ಮಾದರಿಯ ಅಂಶಗಳನ್ನು ಪತ್ತೆ ಮಾಡಿದ್ದು ಕೋವಿಡ್-19 ನ ಎರಡನೆ ಅಲೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. 

ಹಾಗೆಂದ ಮಾತ್ರಕ್ಕೆ ಗಾಬರಿಯಾಗುವುದು ಅಗತ್ಯವಿಲ್ಲ ಎಂದು ಹೇಳುವ ವೈದ್ಯರು, ಮಾಸ್ಕ್ ಧರಿಸಿ, ನಿಯಮಿತವಾಗಿ ಕೈ ತೊಳೆಯುತ್ತಿರಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡರೆ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

ಈ ಸಂಬಂಧ ಖ್ಯಾತ ಕಾರ್ಡಿಯೋಥೊರಾಸಿಕ್ ಮತ್ತು ನಾಳೀಯ ಶಸ್ತ್ರಚಿಕಿತ್ಸಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆ ಮಾಡಿದ್ದು, ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಒಪಿಡಿ ಹಾಗೂ ವಾಕ್ ಇನ್ ಗಳಲ್ಲಿ ಬರುವ ರೋಗಿಗಳಲ್ಲಿ ತೀವ್ರ ಉಸಿರಾಟದ ಕಾಯಿಲೆ ಕಂಡುಬಂದಿದ್ದು, ಕೋವಿಡ್-19 ಮಾದರಿಯ ಅಂಶಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆರೋಗ್ಯ ಸಲಹೆಗಾರರಿಗೂ ಸರಿಯಾದ ರಕ್ಷಣೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ವಿನಂತಿಸುತ್ತಿದ್ದೇವೆ ಎಂದು ಹೇಳಿದ್ದಾರೆ. 

ಹಲವೆಡೆ ಕೂಟಗಳು ನಡೆಯುತ್ತಿವೆ, ಜನರು ವಿಪರೀತ ಎನ್ನಿಸುವಷ್ಟು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ. ಕಾರ್ಯಕ್ರಮದ ಆಯೋಜಕರು ಸಹ ತಾಪಮಾನ ಪರೀಕ್ಷೆ ಮಾಡುತ್ತಿಲ್ಲ ಎಂದು ಡಾ. ಗೋಪಾಲಕೃಷ್ಣ ಎಚ್ಚರಿಸಿದ್ದಾರೆ. 

ವಿಕ್ಟೋರಿಯಾ ಕಾಲೇಜ್ ನ ಡೀನ್ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ. ಜಯಂತಿ ಸಿಆರ್  ಈ ಬಗ್ಗೆ ಮಾತನಾಡಿದ್ದು, ಪ್ರತಿ ದಿನ ಕೋವಿಡ್-19 ನ 100 ಪ್ರಕರಣಗಳು ವರದಿಯಾಗುತ್ತಿವೆ.  ಕೋವಿಡ್-19 ಹೊರತಾದ ಪ್ರಕರಣಗಳಿಗೆ ಒಪಿಡಿ ಸೇವೆಗಳನ್ನು ಸೋಮವಾರದಿಂದ ಪ್ರಾರಂಭಿಸಿದ ನಂತರ ಪರಿಸ್ಥಿತಿಯ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗಲಿದೆ ಮುಂದಿನ ಕೆಲವು ವಾರಗಳ ವರೆಗೆ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಯಾವುದಕ್ಕೂ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ. 

SCROLL FOR NEXT