ರಾಜ್ಯ

ರಾಯಬಾಗ: ಸರ್ಕಾರಿ ಜಮೀನು ಒತ್ತುವರಿ ವಿರುದ್ಧ ಸಿಡಿದೆದ್ದ ಸಾರ್ವಜನಿಕರು, ಸೈನಿಕರು, ಮಣಿದ ಸ್ಥಳೀಯ ಆಡಳಿತ! 

Srinivas Rao BV

ರಾಯಬಾಗ: ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ದಶಕಗಳಿಂದ ಒತ್ತುವರಿಯಾಗಿದ್ದ ಸರಕಾರಿ ಜಮೀನನ್ನು ಉಳಿಸಿಕೊಳ್ಳುವುದಕ್ಕೆ ಸೈನಿಕರು, ಸಾರ್ವಜನಿಕರು ಪಣ ತೊಟ್ಟಿದ್ದಾರೆ. 

ಒತ್ತುವರಿ ತೆರವುಗೊಳಿಸುವುದಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿ ಕೂಡ ಕಟ್ಟುನಿಟ್ಟಿನ ಆದೇಶ ನೀಡದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಾವೇ ಸರ್ಕಾರಿ ಜಮೀನನ್ನು ಉಳಿಸಿಕೊಳ್ಳುವ ಕ್ರಮಕ್ಕೆ ಮುಂದಾಗಿದ್ದು ಸರ್ಕಾರದ ಅಧಿಕಾರಿಗಳಿಗೆ ತಕ್ಷಣ‌ ಒತ್ತುವರಿ ಜಾಗ ತೆರವುಗೊಳಿಸಬೇಕೆಂದು ಎಚ್ಚರಿಕೆ‌ ನೀಡಿದ್ದಾರೆ. 

ಕಂಕಣವಾಡಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಬರುವ ಸುಮಾರು 27ಎಕರೆಯಷ್ಟು ಸರ್ಕಾರಿ ಜಾಗ ಒತ್ತುವರಿ ಮಾಡಲಾಗಿದೆ. ಇದನ್ನು ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದರು. ಯೋಧರು, ಗ್ರಾಮಸ್ಥರ ನೇತೃತ್ವದಲ್ಲಿ ಮಾತುಕತೆ ನಡೆಸಲಾಗಿತ್ತಾದರೂ ಈ ವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇದರಿಂದ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. 

ಇನ್ನು ಸರಕಾರಿ ಜಮೀನನ್ನು ಒತ್ತುವರಿ ಮಾಡಿದ್ದನ್ನು ಉಳಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಾದ‌ ರಾಯಬಾಗ ತಹಸೀಲ್ದಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ತಲಾಟಿ ಸಹಭಾಗಿತ್ವದಲ್ಲಿ ಗ್ರಾಮಸ್ಥರ ನೇತ್ವದಲ್ಲಿ ಪಟ್ಟಣದ ಒತ್ತುವರಿ ಸ್ಥಳಗಳನ್ನು ಸಾರ್ವಜನಿಕರು ರಾಯಬಾಗ ತಹಸೀಲ್ದಾರರಿಗೆ ತೋರಿಸಿದರು. 

ಈ ವೇಳೆ ಅಧಿಕಾರಿಗಳ ಹಾಗೂ ಗ್ರಾಮಸ್ಥರ ನಡುವೆ ಚಿಕ್ಕ ಚಿಕ್ಕ‌ಮಾತಿನ‌ ಚಕಮಕಿಯೂ ನಡೆಯಿತು. ಈ‌ ಮದ್ಯೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಹಾಗೂ ತಲಾಟಿ ತುಟಿ ಬಿಚ್ಚಲಿಲ್ಲ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಯಬಾಗ ತಹಸೀಲ್ದಾರ, ಶ್ರೀಕಾಂತ್ ಭಜಂತ್ರಿ, ಒತ್ತುವರಿ ಮಾಡಿರುವುದು ಖಚಿತವಾದರೆ ಅವರ ಮೇಲೆ‌ ಸರ್ಕಾರದ‌ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಒತ್ತುವರಿಯಾಗಿರುವುದನ್ನು ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಅದನ್ನು ಸರ್ವೇ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.. ಈ ಕುರಿತು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕೆ. ಎಂ ಕಿಲಾರೆ ಮಾತನಾಡಿ, ಒತ್ತುವರಿಯಾಗಿದು ನಿಜವಾಗಿದೆ. ಆದರೆ‌ ಪಟ್ಟಣ ಪಂಚಾಯಿತಿಯಲ್ಲಿ ದಾಖಲೆ ಇಲ್ಲ. ಆದ್ದರಿಂದ‌ ಸರ್ವೆ ನಡೆಸಲು ತಹಸೀಲ್ದಾರ್ ಕ್ರಮ ಕೈಗೊಂಡಿದ್ದಾರೆ ಎಂದರು.

ಸರ್ಕಾರಿ ಜಾಗ ಒತ್ತುವರಿ ಮಾಡಿದ್ದನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರ ಬಿಗಿ ಪಟ್ಟಿಗೆ ಮಣಿದಿರುವ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

SCROLL FOR NEXT