ರಾಜ್ಯ

‘ಕರ್ನಾಟಕ ಬಂದ್’ಗೆ ಮಿಶ್ರ ಪ್ರತಿಕ್ರಿಯೆ, ಕನ್ನಡಪರ ಸಂಘಟನೆಗಳಿಂದ ಸಿಎಂ ಯಡಿಯೂರಪ್ಪ ಭೇಟಿ

Lingaraj Badiger

ಬೆಂಗಳೂರು: ಕೈಗಾರಿಕೆಗಳು ಸೇರಿದಂತೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಯಲ್ಲಿ ಸ್ಥಳೀಯರಿಗೆ(ಕನ್ನಡಿಗರು) ಉದ್ಯೋಗ ಮೀಸಲಾತಿ ಒದಗಿಸುವಂತೆ ಶಿಫಾರಸು ಮಾಡಿರುವ ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ 'ಕರ್ನಾಟಕ ಬಂದ್' ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಕೆಲ ಬಣಗಳು ಒಳಗೊಂಡಿರುವ ‘ಕರ್ನಾಟಕ ಸಂಘಟನೆಗಳ ವೇದಿಕೆ’ಯಿಂದ  ಬಂದ್ ಕರೆ ನೀಡಲಾಗಿತ್ತು. ಬಂದ್ ಅನ್ನು ಓಲಾ-ಉಬರ್ ಕ್ಯಾಬ್ ಚಾಲಕರ ಸಂಘ, ಕೆಲ ಆಟೋ ಚಾಲಕರ ಸಂಘಗಗಳು, ರೈತ ಸಂಘಗಳು, ರಸ್ತೆ ಮಾರಾಟಗಾರರ ಸಂಘಗಳು, ಕಾರ್ಮಿಕ ಸಂಘಗಳು ಮತ್ತು ಸಾರಿಗೆ ಸಂಘಗಳು ಬೆಂಬಲಿಸಿವೆ.  

ಈ ಮಧ್ಯೆ, ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರು ಸಹ ಬಂದ್ ಗೆ ಬೆಂಬಲ ನೀಡಿದ್ದರಿಂದ ವಿಮಾನ ಪ್ರಯಾಣಿಕರು ತೊಂದರೆ ಎದುರಿಸಿದರು. ಆದರೂ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎ) ಬಿಎಂಟಿಸಿ ಬಸ್ ಸೇವೆ ಲಭ್ಯವಿದ್ದ ಕಾರಣ ಪ್ರಯಾಣಿಕರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದರು.
   
ಶಾಲಾ-ಕಾಲೇಜುಗಳು ಎಂದಿನಂತೆ ರಾಜ್ಯದಾದ್ಯಂತ ತೆರೆದಿದ್ದವು. ಕೆಲ ಶಾಲಾ ಮಕ್ಕಳ ವಾಹನಗಳ ಚಾಲಕರು ಸಹ ಬಂದ್ ಗೆ ಬೆಂಬಲ ನೀಡಿದ್ದರಿಂದ ಪೋಷಕರು ಮಕ್ಕಳನ್ನು ಇತರ ವ್ಯವಸ್ಥೆಗಳ ಮೂಲಕ ಶಾಲೆಗೆ ಬಿಡಬೇಕಾಯಿತು.

ಕನ್ನಡ ರಕ್ಷಣಾ ವೇದಿಕೆ (ಕೆಆರ್‌ವಿ)ಯ ಪ್ರವೀಣ್ ಶೆಟ್ಟಿ ಅವರನ್ನು ಮನೆಯಿಂದ ಹೊರಗೆ ಬರಲು ನಗರ ಪೊಲೀಸರು ಅವಕಾಶ ನೀಡಿಲ್ಲ.

ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ವಿಶ್ವವಿದ್ಯಾಲಯ, ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ನಿಗದಿಪಡಿಸಿದ್ದ ಪರೀಕ್ಷೆಗಳನ್ನು ಮುಂದೂಡಿದೆ. ಬೆಂಗಳೂರಿನಲ್ಲಿ ಸುಮಾರು 180 ರೌಡಿ ಶೀಟರ್‌ಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸಿಎಂ ಭೇಟಿ ಮಾಡಿದ ಕನ್ನಡಪರ ಸಂಘಟನೆಗಳು
ಕರ್ನಾಟಕ ಬಂದ್ ಗೆ ಕರೆ ನೀಡಿದ್ದ ಕನ್ನಡಪರ ಸಂಘಟನೆಗಳ ಮುಖಂಡರು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯಯೂರಪ್ಪ ಅವರನ್ನು ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಭೇಟಿ ಮಾಡಿ, ಸರೋಜಿನಿ ಮಹಿಶಿ ವರದಿ ಜಾರಿಗೊಳಿಸುವಂತೆ ಮನವಿ ಸಲ್ಲಿಸಿದರು.

ಬಂದ್ ಗೆ ಕಲ್ಯಾಣ-ಕರ್ನಾಟಕ ಪ್ರದೇಶದಲ್ಲಿ ನೀರಸ ಪ್ರತಿಕ್ರಿಯೆ
ಇನ್ನು ಕರ್ನಾಟಕ ಬಂದ್ ಕರೆಗೆ ಕಲ್ಯಾಣ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
  
ಹೈದರಾಬಾದ್-ಕರ್ನಾಟಕ ಪ್ರಾಂತ್ಯವನ್ನು ಅಧಿಕೃತವಾಗಿ ಕಲ್ಯಾಣ-ಕರ್ನಾಟಕ ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಗುಲ್ಬರ್ಗಾ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಒಳಗೊಂಡಿದೆ.
  
ಕಲಬುರಗಿ ನಗರದಲ್ಲಿ ಬಂದ್, ಸಾಮಾನ್ಯ ಜನ-ಜೀವನದ ಮೇಲೆ ಪರಿಣಾಮ ಬೀರಿಲ್ಲ. ಶಾಲಾ- ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರ ಕೂಡ ಸಾಮಾನ್ಯವಾಗಿತ್ತು. ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘವು ಬಂದ್‌ಗೆ ನೈತಿಕ ಬೆಂಬಲವನ್ನು ಮಾತ್ರ ನೀಡಿದ್ದರೂ, ಬಂದ್ ನಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. 

SCROLL FOR NEXT