ರಾಜ್ಯ

ರಾಜ್ಯ ಅಂಗಡಿ ಮಳಿಗೆಗಳ ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಿ; ಮೇಯರ್ ಗೌತಮ್ ಕುಮಾರ್

Shilpa D

ಬೆಂಗಳೂರು: ರಾಜ್ಯದ ಎಲ್ಲಾ ಅಂಗಡಿ ಮಳಿಗೆಗಳ ನಾಮಫಲಕಗಳನ್ನು ಕನ್ನಡದಲ್ಲಿ ಬರೆಸಲು ಸಂಘ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಜಯ ಕರ್ನಾಟಕ ವತಿಯಿಂದ ಆಯೋಜಿಸಿದ್ದ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ  ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಸಂಬಂಧ ಬಿಬಿಎಂಪಿ ಆದೇಶ ಮಾಡಿದೆ.

ಆದರೂ, ಕೆಲವರು ನಿಮಯ ಉಲ್ಲಂಘನೆ ಮಾಡುತ್ತಾರೆ. ಮಹದೇವಪುರ ವಲಯದಲ್ಲಿ ಹೆಚ್ಚಾಗಿ ಈ ಪ್ರಕರಣಗಳು ಬೆಳಕಿನ ಬಂದಿದ್ದು, ಸಂಘ ಸಂಸ್ಥೆಗಳು ಜಾಗೃತಿ ಆಂದೋಲನ ಕೈಗೊಳ್ಳಬೇಕೆಂದು ತಿಳಿಸಿದರು.

ಕೊಳಗೇರಿ ಪ್ರದೇಶದಲ್ಲಿನ ಜನರ ಆರೋಗ್ಯದ ಕಾಳಜಿ ವಹಿಸುವ ಬಗ್ಗೆ ನಾವು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದ ಅವರು, ಉಳ್ಳವರು ಆರೋಗ್ಯಕ್ಕಾಗಿ ಹಣ ಖರ್ಚು ಮಾಡುತ್ತಾರೆ. ಆದರೆ ಇದರಿಂದ ಬಡವರಿಗೆ ತುಂಬಾ ತೊಂದರೆ ಆಗುತ್ತದೆ ಎಂದರು.

ಕೆಸಿ‌ ಜನರಲ್ ಆಸ್ಪತ್ರೆಯ ಮಹಿಳಾ ಆರೋಗ್ಯ ತಜ್ಞೆ ಡಾ.ಮಂಜುಳಾ ಮಾತನಾಡಿ, ಶಾರೀರಿಕ ಆರೋಗ್ಯವನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ ಯಾಗಿದೆ. 

ಆದರೆ, ಅನಾರೋಗ್ಯ ಪೀಡಿತರಾಗುವವರೆಗೆ ಯಾರೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಎಂಬುದು ವಾಸ್ತವಿಕತೆಯಾಗಿದೆ ಎಂದ ಅವರು, ಜೀವನವನ್ನು ಸಂಪೂರ್ಣವಾಗಿ ಆಸ್ವಾದಿಸಲು, ಅನುಭವಿಸಲು ಆರೋಗ್ಯ ಅತೀ ಅಗತ್ಯ. ಸಂತೋಷದ ಮತ್ತು ಸುಖದ ಕೀಲಿಕೈ ಆರೋಗ್ಯವೇ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜ್, ಜಯ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಬಿ.ಎನ್.ಜಗದೀಶ್,  ಆಯುರ್ವೇದ ತಜ್ಞ ಡಾ.ವಿ.ಗಿರೀಶ್ ಕುಮಾರ್, ಜಯ ಕರ್ನಾಟಕ ಬೆಂಗಳೂರು ಅಧ್ಯಕ್ಷ ಡಾ.ಎಂ.ಜಗದೀಶ್ ಗೌಡ  ಸೇರಿದಂತೆ ಪ್ರಮುಖರು ಇದ್ದರು.

SCROLL FOR NEXT