ರಾಜ್ಯ

ಮಾರ್ಚ್ 5ರವರೆಗೆ ಆರ್ದ್ರಾಗೆ ನ್ಯಾಯಾಂಗ ಬಂಧನ

Srinivasamurthy VN

ಬೆಂಗಳೂರು: ಪ್ರತಿಭಟನೆ ವೇಳೆ ಕಾಶ್ಮೀರ ಮುಕ್ತ ಎಂಬ ಬರಹವುಳ್ಳ ಭಿತ್ತಿ ಪತ್ರ ಪ್ರದರ್ಶಿಸಿದ ಯುವತಿ ಆರ್ದ್ರಾಗೆ ಮಾರ್ಚ್ 5ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

6ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣ ಮೂರ್ತಿ ಅವರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ಇಂದು ನಗರದ ಕೋರಮಂಗಲದ ಎನ್ ಜಿವಿಯಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಪೊಲೀಸರು ಆರೋಪಿಯನ್ನು ಹಾಜರು ಪಡಿಸಿದರು.

ಶುಕ್ರವಾರ ಇಲ್ಲಿನ ಪುರಭವನದ ಮುಂಭಾಗದಲ್ಲಿ ಶ್ರೀರಾಮಸೇನೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಇನ್ನಿತರ ಸಂಘಟನೆಗಳ ನೇತೃತ್ವದಲ್ಲಿ ಯುವತಿ ಅಮೂಲ್ಯ ವಿರುದ್ಧ ಟೌನ್ ಹಾಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಮಲ್ಲೇಶ್ವರಂ ಮೂಲದ ಯುವತಿ ಆರ್ದ್ರಾ ಫ್ರೀ ಕಾಶ್ಮೀರ ಘೋಷಣೆಯುಳ್ಳ ಭಿತ್ತಿಪತ್ರ ಹಿಡಿದಿದ್ದರು. ಕೂಡಲೇ ಆರ್ದ್ರಾರನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ಐಪಿಸಿ ಸೆಕ್ಷನ್ 153ಎ, 153ಬಿ ಶಾಂತಿ ಭಂಗ ಹಾಗೂ ಕೋಮುಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದರು. 

ಬಳಿಕ ಪೊಲೀಸರು ಯುವತಿಯನ್ನು ವೈದ್ಯಕೀಯ ತಪಾಸಣೆ ನಡೆಸಿ, ಸರ್ಕಾರಿ ರಜೆ ಇರುವುದರಿಂದ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದ್ದರು. ನ್ಯಾಯಾಧೀಶ ಕೃಷ್ಣಮೂರ್ತಿ ಅವರು ಮಾ.5ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.

SCROLL FOR NEXT