ರಾಜ್ಯ

ಯುವಕನನ್ನು ಅಪಹರಿಸಿ ಕೊಂದು ನದಿಗೆ ಎಸೆದಿದ್ದ ನಾಲ್ವರು ಹಂತಕರಿಗೆ ಜೀವಾವಧಿ ಶಿಕ್ಷೆ

Manjula VN

ಬೆಂಗಳೂರು: ಯುವಕನೋರ್ವನನ್ನು ಅಪಹರಿಸಿ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ  ಮಾಡಿ ಶವವನ್ನು ವೃಷಭಾವತಿ ನಾಲೆಗೆ ಬಿಸಾಡಿದ್ದ ನಾಲ್ವರು ಅಪರಾಧಿಗಳಿಗೆ ನಗರದ 56ನೇ ಸಿವಿನ್ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

ಖಾಸಗಿ ಬ್ಯಾಂಕ್ ನೌಕರ ವಿನಯ್ ಕುಮಾರ್ ನನ್ನ ಕೊಲೆ ಮಾಡಿದ್ದ ಸುಬ್ಬಣ್ಣ, ಮಧುಸೂದನ್, ಎಸ್,ಅಂಬಿಕಾ ಮತ್ತು ಬಾಬು ರೆಡ್ಡಿಗೆ ಜೀವಾವಧಿ, ತಲಾ ರೂ.40 ಸಾವಿರ ದಂಡ ವಿಧಿಸಿದೆ. 

ಮೃತ ಯುವಕ ವಿನಯ್ ಕುಮಾರ್ ಕಾಲೇಜು ದಿನಗಳಲ್ಲಿ ಯುವತಿಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಎರಜು ಕುಟುಂಬಗಳು ಒಪ್ಪಿರಲಿಲ್ಲ. ಅಂತಿಮವಾಗಿ ನವ್ಯಾ ಕುಟುಂಬದವರು ಮದುವೆಗೆ ಒಪ್ಪಿದ್ದರು. ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳವಾಗಿ ಪ್ರಕರಣ ಪೊಲೀಸ್ ಠಾಣೆ ಮಟ್ಟಿಲೇರಿತ್ತು. 

ಒಮ್ಮೆ ವಿನಯ್ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದ. ಅದಾದ ಬಳಿಕ ಯುವತಿಗೆ ಮತ್ತೊಬ್ಬನೊಂದಿಗೆ 2010ರ ಡಿ.3ರಂದು ಮದುವೆಯಾಗಿತ್ತು. ಮರುದಿನ ಬೆಳಿಗ್ಗೆ ವಿನಯ್ ಕುಮಾರ್, ಲಗ್ಗೆರೆಯಲ್ಲಿರುವ ಆಕೆಯ ಮನೆ ಬಳಿ ಬೈಕ್ ನಲ್ಲಿ ತೆರಳಿದ್ದ. ಯುವತಿಯ ಕುಟುಂಬ ಸದಸ್ಯರು ವಿನಯ್'ಗೆ ಹಿಗ್ಗಾಮುಗ್ಗಾ ಥಳಿಸಿ, ಕಾರಿನಲ್ಲಿ ಅಪಹರಿಸಿ ಕೊಂದು ಮೈಸೂರು ರಸ್ತೆ ವೃಷಭಾವತಿ ನಾಲೆಯಲ್ಲಿ ಬಿಸಾಡಿದ್ದರು. 

ರಾಜಗೋಪಾಲ ನಗರ ಠಾಣೆ ಪೊಲೀಸರು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ, ಕೋರ್ಟ್'ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ಕೆ.ಮೋಹನ್ ಕುಮಾರ್ ವಾದಿಸಿದ್ದರು. 

SCROLL FOR NEXT