ಚಿತ್ರದುರ್ಗ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿಯೊಬ್ಬಳು ತನ್ನ 10 ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಐನಳ್ಳಿ ಗ್ರಾಮದಲ್ಲಿ ನಡೆದಿದೆ.
ಐನಳ್ಳಿ ಗ್ರಾಮದ ಆಶಾಬಾಯಿ (24) ಮೃತ ಮಹಿಳೆ. ಹೆರಿಗೆಯ ನಂತರ ಅನಾರೋಗ್ಯ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಮೃತರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಗುವನ್ನು ನೀರಿನ ಟಬ್ನಲ್ಲಿ ಮುಳುಗಿಸಿ ಕೊಂದ ಬಳಿಕ, ಅವರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೆರಿಗೆ ನಂತರ ಅನಾರೋಗ್ಯದಿಂದ ಬಳಲುತ್ತಿದ್ದೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಂಡರೆ ಮಗು ಅನಾಥವಾಗುತ್ತದೆ ಎಂದು ಭಾವಿಸಿ, ಮಗುವನ್ನು ಕೊಂದಿರುವುದಾಗಿ ಅವರು ಸಾಯುವ ಮುನ್ನ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.
ಆಶಾಬಾಯಿ ಲಂಬಾಣಿಹಟ್ಟಿಯ ಹೇಮಂತ್ ಜತೆ ಎರಡು ವರ್ಷದ ಹಿಂದೆ ವಿವಾಹ ಆಗಿದ್ದರು ಎನ್ನಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.