ರಾಜ್ಯ

ಆನೆಗೊಂದಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ

Lingaraj Badiger

ಗಂಗಾವತಿ: ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ಗುರುವಾರ ವಿಧ್ಯುಕ್ತ ಚಾಲನೆ ನೀಡಿದರು.

ಆನೆಗೊಂದಿ ಉತ್ಸವದ ಅಂಗವಾಗಿ ಇಂದು ಶ್ರೀಕೃಷ್ಣ ದೇವರಾಯ ಮುಖ್ಯವೇದಿಕೆಯಲ್ಲಿ ಉತ್ಸವ-20ಕ್ಕೆ ಚಾಲನೆ‌ ನೀಡಿದ ಬಳಿಕ ಮಾತನಾಡಿದ ಸಿಟಿ ರವಿ ಅವರು, ಇಂದು ಸ್ವಾರ್ಥಕ್ಕಾಗಿ ಹಾಗೂ ಮತ ಬ್ಯಾಂಕಿಗಾಗಿ ದೇಶದ ಹಿತಾಸಕ್ತಿಗಾಗಿ ಬಲಿಕೊಡುವಂತ ಕೆಲಸವಾಗುತ್ತದೆ. ನಮ್ಮ ಅಸಹಿಷ್ಣತೆ, ಅಸಂಘಟನೆ ಹಾಗೂ ಮತವಿಭಜನೆಯಂತ ಘಟನೆಗಳಿಂದಾಗಿ ಭವ್ಯ ಸಾಮ್ರಾಜ್ಯ ವಿಜಯನಗರ ಹೇಗೆ ಅಧಃಪತನವಾಯಿತು ಎಂಬ ಅಂಶ ನಮಗೆ ಪಾಠವಾಗಬೇಕು ಎಂದರು.

ರಾಜ್ಯದ ಸಂಸ್ಕೃತಿ ಎಂದರೆ ಕೇವಲ‌ ಮೈಸೂರು ಆಗಬಾರದು, ಕಲ್ಯಾಣ ಕರ್ನಾಟಕದ ಪರಂಪರೆಯೂ ರಾಜ್ಯದ ಸಂಸ್ಕೃತಿಯಾಗಬೇಕು ಎಂದು ಕರೆ ಕೊಟ್ಟರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಆನೆಗೊಂದಿ ಸೇರಿದಂತೆ ಕಲ್ಯಾಣ ಕರ್ನಾಟಕದ ಬಹುತೇಕ ಐತಿಹಾಸಿ ತಾಣಗಳು ಪ್ರವಾಸೋದ್ಯಮದ ಯೋಜನೆ ಮೂಲಕ ಅಭಿವೃದ್ಧಿಯಾಗಬೇಕು, ರಾಜ್ಯ ಮಾತ್ರವಲ್ಲ ಇಡೀ ದೇಶದ ಪ್ರವಾಸಿಗಳನ್ನು ಸೆಳೆಯುವ ಯೋಜನೆಗಳನ್ನು ರೂಪಿಸಬೇಕು ಎಂದು ಮನವಿ ಮಾಡಿದರು.

ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಅಮರೇಗೌಡ ಬೈಯಾಪುರ, ಹಾಲಪ್ಪ ಆಚಾರ, ಬಸವರಾಜ ದಢೇಸ್ಗೂರು ಮಾತನಾಡಿದರು.

ಆನೆಗೊಂದಿ ರಾಜ ಮನೆತನದ ಮುಖ್ಯಸ್ಥ ಮಾಜಿ ಸಚಿವ ರಂಗದೇವರಾಯಲು, ಕೃಷ್ಣದೇವರಾಯ, ಜಿಲ್ಲಾಧಿಕಾರಿ ಪಿ. ಸುನಿಲ್‌ಕುಮಾರ, ಜಿ.ಪಂ. ಸಿಇಒ ರಘುನಂದನಮೂರ್ತಿ, ಜಿಲ್ಲಾ ಎಸ್ಪಿ ಸಂಗಿತಾ, ಮಾಜಿ ಶಾಸಕ ಜಿ. ವೀರಪ್ಪ, 
ಜಿ.ಪಂ. ಸದಸ್ಯೆ ಅನಿತಾ, ತಾ.ಪಂ ಅಧ್ಯಕ್ಷ  ಮಲ್ಲಿಕಾರ್ಜುನ ಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಜನಾ ದೇವಿ ಇತರರು ಇದ್ದರು.

SCROLL FOR NEXT