ರಾಜ್ಯ

ಅದು ಸುಳ್ಳು ಸುದ್ದಿ! ಗ್ರಾಮ ಪಂಚಾಯ್ತಿ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿಲ್ಲ: ಆಯೋಗ ಸ್ಪಷ್ಟನೆ

Raghavendra Adiga

ಬೆಂಗಳೂರು: 2020ನೇ ಸಾಲಿನ ಗ್ರಾಮ ಪಂಚಾಯತ್ ಚುಬಾವಣೆಗೆ ಅಧಿಸೂಚನೆ ಪ್ರಕಟವಾಗಿದೆ ಎಂಬುದು ಸುಳ್ಳು ಸುದ್ದಿ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. 

ಏ 5 ಮತ್ತು 9ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ ಎಂದು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸರಿಯಲ್ಲ. ಆಯೋಗ ಯಾವುದೇ ಅಧಿಸೂಚನೆ ಹೊರಡಿಸಿಲ್ಲ ಎಂದು ಆಯೋಗದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರೌಢ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಹೊಂದಿರಬೇಕು ಇತ್ಯಾದಿ ಷರತ್ತುಗಳನ್ನು ನಮೂದಿಸಿ ಆಯೋಗ ಅಧಿಸೂಚನೆ ಹೊರಡಿಸಿದೆ ಎಂಬುದು ಸರಿಯಲ್ಲ. ನಕಲಿ ರಾಜ್ಯಪತ್ರ ಪ್ರಕಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂದಿದ್ದಾರೆ.
 
ಗ್ರಾಮ ಪಂಚಾಯತ್ ಚುನಾವಣೆಗೆ ಆಯೋಗ ಈವರೆಗೆ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ದಿನಾಂಕವನ್ನೂ ಸಹ ಗೊತ್ತುಪಡಿಸಿಲ್ಲ. ಇಂತಿಷ್ಟೇ ಶಿಕ್ಷಣ, ಇಷ್ಟೇ ಮಕ್ಕಳನ್ನು ಹೊಂದಿರಬೇಕು ಎಂಬ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ ಎಂದು ಹೇಳಿದ್ದಾರೆ. 

ಕಳೆದ ಭಾನುವಾರ ಸಹ ಇದೇ ರೀತಿ ಗ್ರಾಮ ಪಂಚಾಯತ್ ಚುನಾವಣೆಗೆ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ ಎಂದು ಸುಳ್ಳು ಸುದ್ದಿ ಹರಿದಾಡಿತ್ತು. 

ಇಂದು ಹರಿಬಿಟ್ಟಿರುವ ನಕಲಿ ಅಧಿಸಚನೆ ಪ್ರಕಾರ ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ,ತುಮಕೂರು, ಹಾಸನ, ಮಂಡ್ಯ, ಕೋಲಾರ, ಹಾಸನ, ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ‌ ಮತ್ತು ಕರಾವಳಿ ಭಾಗಗಳಿಗೆ ಚುನಾವಣೆ ನಡೆಯಲಿದೆ.

ಇವಿಎಂ ಮತಯಂತ್ರಗಳನ್ನು ಈ ಬಾರಿಯೂ ಬಳಕೆ ಮಾಡಲಾಗುತ್ತಿದ್ದು ಬೆಳಿಗ್ಗೆ 6 ರಿಂದ ಸಂಜೆ‌6ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ನಕಲಿ ಅಧಿಸೂಚನೆಯಲ್ಲಿ ತಿಳಿಸಿತ್ತು. ಈ ಬಗ್ಗೆ ವ್ಯಾಪಕ ಸುಳ್ಳು ಸುದ್ದಿ ಹಬ್ಬಿತ್ತು.
 

SCROLL FOR NEXT