ರಾಜ್ಯ

ನಿಂಬೆಹಣ್ಣು ತರಕಾರಿ ಮಾರಿಕೊಂಡಿದ್ದವನು ಮುಖ್ಯಮಂತ್ರಿ ಆಗಿದ್ದೇನೆ: ‌ಸಿಎಂ ಯಡಿಯೂರಪ್ಪ

Srinivasamurthy VN

ಬೆಂಗಳೂರು: ಪ್ರೌಢಶಾಲೆ ವ್ಯಾಸಂಗ ಮಾಡುವಾಗ ಬೂಕನ ಕೆರೆಯಲ್ಲಿ ನಿಂಬೇಹಣ್ಣು,ತರಕಾರಿ ಮಾರುತ್ತಿದ್ದವನು ಇಂದು ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ, ಅಚಲ ವಿಶ್ವಾಸವಿದ್ದ ಯಾರು ಬೇಕಾದರೂ ಆಗಬಹುದು ಎಂದು ತಮ್ಮ ಜೀವನವನ್ನೇ ಉದಾಹರಣೆ ನೀಡಿ ವಿದ್ಯಾರ್ಥಿಗಳಿಗೆ ಭವಿಷ್ಯದ ಗುರಿಯೊಂದಿಗೆ ಸಂಕಲ್ಪ ತೊಟ್ಟು ಮುನ್ನಡೆ ಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸರ್ಕಾರದಿಂದ ಪದವಿ ವಿದ್ಯಾ ರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಗಳ ವಿತರಣೆ ಯೋಜನೆಯಡಿ ಸರ್ಕಾರಿ, ಅನುದಾ ನಿತ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ಪದವಿ ಹಾಗೂ ಇಂಜಿನಿಯರಿಂಗ್‌, ಮೆಡಿಕಲ್‌, ಪಾಲಿಟೆಕ್ನಿಕ್‌ ಡಿಪ್ಲೊಮಾ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ‌ಟಾಪ್ ವಿತರಣೆ ಮಾಡಲಾಯಿತು.ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ-ಅನುದಾನಿತ ಕಾಲೇಜುಗಳ 1,09,916 ವಿದ್ಯಾರ್ಥಿಗಳಿಗೆ 311 ಕೋಟಿ ರೂ ವೆಚ್ಚದಲ್ಲಿ ಲ್ಯಾಪ್‌ಟಾಪ್‌ ವಿತರಣೆಗೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಸಾಂಕೇತಿಕವಾಗಿ ಚಾಲನೆ ನೀಡಿದರು.ಅಲ್ಲದೆ ಯುವ ಸಬಲೀಕರಣ ಕೇಂದ್ರಗಳನ್ನು ಉದ್ಘಾಟಿಸಿದರು. 

ಈ ವೇಳೆ ಮಾತನಾಡಿದ ಅವರು, 'ನಾನು ಮಂಡ್ಯದಲ್ಲಿ ಹೈಸ್ಕೂಲ್ ಓದಬೇಕಾದರೆ ತರಕಾರಿ, ನಿಂಬೆಹಣ್ಣು ಮಾರಿಕೊಂಡು ಇದ್ದೆ. ಇವಾಗ ರಾಜ್ಯದ ಜನರ ಆಶೀರ್ವಾದದಿಂದ‌ ನಾಲ್ಕನೇ ಬಾರಿಗೆ ಸಿಎಂ ಆಗಿ ಬಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಬೂಕನಕರೆಯಲ್ಲಿ ಹುಟ್ಟಿ ಹಲವು ರಾಜಕೀಯ ನಾಯಕರ ಮಾರ್ಗದರ್ಶನ ಪಡೆದು ಇವಾಗ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ನಾನು ಸಂಕಲ್ಪ ಮಾಡಿದ್ದರಿಂದಲೇ ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೇ ಸಾಕ್ಷಿ. ಸರ್ಕಾರಿ ಉದ್ಯೋಗ ಅಷ್ಟೇ ಅಲ್ಲ. ಸಣ್ಣ ಕೈಗಾರಿಕಾ ಕಂಪನಿ ಶುರು ಮಾಡಿ.ಇದರಿಂದ ನೂರಾರು ಜನರಿಗೆ ಉದ್ಯೋಗ ನೀಡಿ. ನೀವು ಮನಸ್ಸು ಮಾಡಿದರೆ ಅಂದುಕೊಂಡ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಸ್ವಾಭಿಮಾನದಿಂದ ನಿಮ್ಮ‌ ಕಾಲಿನ ಮೇಲೆ ನೀವು ನಿಂತುಕೊಳ್ಳಿ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರ ಬದುಕು ಜನರ ಬದುಕನ್ನು ಬದಲಿಸಿದೆ. ಇಂದಿನ ಯುವ ಜನತೆ ಆಧುನಿಕ ಅಲೆಯಲ್ಲಿ ಸಿಲುಕಿ ದೇಶದ ಪರಂಪರೆ ಆಚಾರ-ವಿಚಾರ ಮರೆಯುವ ಪರಿಸ್ಥಿತಿ ಬರುತ್ತಿದ್ದಾರೆ. ವಿದ್ಯಾರ್ಥಿಗಳು ವಿದೇಶಿ ವ್ಯಾಮೋಹದಿಂದ ಹೊರಗೆ ಬನ್ನಿ. ಜನರ ತೆರಿಗೆ ಹಣದಲ್ಲಿ ನಿಮ್ಮನ್ನು ಸಾಫ್ಟವೇರ್ ಇಂಜನಿಯರ್ಸ್, ಡಾಕ್ಟರ್ಸ್ ಮಾಡ್ತೀವಿ. ಆದರೆ ಇಲ್ಲಿ ಓದಿ ವಿದೇಶದಲ್ಲಿ ನೆಲೆಸುವ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ಮಾಡುವುದನ್ನು ಬಿಡಬೇಕು ಎಂದು ಯಡಿಯೂರಪ್ಪ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ದಿನಕ್ಕೆ ಹತ್ತು ಪುಟವಾದರೂ, ವಿವೇಕಾನಂದರ ಜೀವನ ಚರಿತ್ರೆಯನ್ನ ಓದಿ. ಇದರಿಂದ ನಿಮಗೆ ಸ್ಪೂರ್ತಿ ಮತ್ತು ಸ್ವಾಭಿಮಾನ ಬರುತ್ತದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.

ಭಾರತ ಮಹಿಳಾ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿ ವೇದಾಕೃಷ್ಣಮೂರ್ತಿ, ಬೌನ್ಸ್ ಸಿಇಓ ವಿವೇಕಾನಂದ್​​ಗೆ ಪ್ರಶಸ್ತಿ ಪ್ರದಾನ ಮಾಡಿದರು.ಕಾರ್ಯಕ್ರಮದಲ್ಲಿ ಡಿಸಿಎಂ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ, ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಕೃಷ್ಣಮೂರ್ತಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

SCROLL FOR NEXT