ರಾಜ್ಯ

ಬೆಂಗಳೂರು:  ಇಬ್ಬರು ಮೊಬೈಲ್ ಕಳ್ಳರ ಬಂಧನ: 15 ಲಕ್ಷ ರೂ.ಮೌಲ್ಯದ 103 ಮೊಬೈಲ್ ವಶ

Raghavendra Adiga

ಬೆಂಗಳೂರು: ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರ ಮೊಬೈಲ್ ಎಗರಿಸುತ್ತಿದ್ದ, ಇಬ್ಬರು ಮೊಬೈಲ್ ಕಳ್ಳರನ್ನು ಪೊಲೀಸರು ಬಂಧಿಸಿ, 103 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. 

ಬೆಂಗಳೂರಿನ ಸೈಯದ್ ಮೆಹರಾನ್ (22), ಶರತ್ ಕುಮಾರ್ (22) ಬಂಧಿತರು.  ಆಂಧ್ರಪ್ರದೇಶ ಮೂಲದ ರಘು ತಲೆಮರಿಸಿಕೊಂಡ ಆರೋಪಿ. 

ಇದೇ ತಿಂಗಳ 12 ರಂದು ನಗರದ ಹೆಬ್ಬಾಳ ಬಿಎಂಟಿಸಿ ಬಸ್ಸು ನಿಲ್ದಾಣದಲ್ಲಿ ತಮ್ಮ ಮೊಬೈಲ್ ಕಳ್ಳತನವಾಗಿದೆ  ಎಂದು ಆರೋಪಿಸಿ ಜಯಚಂದ್ರ ಎಂಬುವವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 
ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, 2019ರ ನವೆಂಬರ್ ತಿಂಗಳಿನಿಂದ ಇಲ್ಲಿಯವರೆಗೆ ಕಳ್ಳತನ ಮಾಡಿ ಇಟ್ಟುಕೊಂಡಿದ್ದ ಒಟ್ಟು 103 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. 

ಕಳ್ಳತನ ಮಾಡಿರುವ ಮೊಬೈಲ್ ಫೋನ್ ಗಳ ಅಂದಾಜು 15,00,000 ಮೌಲ್ಯ ಆಗಿದ್ದು, ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರು ಬಸ್ಸು ನಿಲ್ದಾಣ ಹಾಗೂ ಜನನಿಬಿಡ ಸ್ಥಳಗಳನ್ನು ಕೇಂದ್ರಿಕರಿಸಿಕೊಂಡು ಮೊಬೈಲ್ ಕಳವು ಮಾಡುತ್ತಿದ್ದುದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸೈಯದ್ ವಿರುದ್ಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ ‌.
 

SCROLL FOR NEXT