ಬೆಂಗಳೂರು: ಮೆಟ್ರೋ 2ನೇ ಹಂತದ ಕಾಮಗಾರಿಗಾಗಿ 3 ತಿಂಗಳುಗಳಲ್ಲಿ ಜಯದೇವ ಆಸ್ಪತ್ರೆ ಮುಂಭಾಗದ ಮೇಲ್ಸೇತುವೆಯನ್ನು ತೆರವು ಮಾಡುವ ಕಾರ್ಯಾಚರಣೆ ಸೋಮವಾರ ರಾತ್ರಿಯಿಂದ ಮತ್ತೆ ಆರಂಭವಾಗಿದೆ.
70 ಅಡಿ ಎತ್ತರದಲ್ಲಿ ಗೊಟ್ಟಿಗೆರೆ-ವಾಗವಾರ ಮಾರ್ಗಕ್ಕೆ ನಿಲ್ದಾಣ ನಿರ್ಮಾಣವಾಗಲಿದ್ದು, ಈ ಹಿನ್ನೆಲೆಯಲ್ಲಿ 2ನೇ ಹಂತದ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಈಗಾಗಲೇ 1ನೇ ಹಂತದ ತೆರವು ಕಾರ್ಯ ಮುಕ್ತಾಯವಾಗಿದೆ.
ರಾತ್ರಿ 10 ಗಂಟಿಯಿಂದ ಮುಂಜಾನೆ 6ರವರೆಗೂ ತೆರವು ಕಾರ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಸಿಲ್ಕ್ ಬೋರ್ಡ್, ಜಯಜನಗರ, ಬನಶಂಕರಿಗೆ ತೆರಳುವ ಮಾರ್ಗಗಳ ಸಂಚಾರ ಬದಲಾವಣೆ ಮಾಡಲಾಗಿದ್ದು, ಮಡಿವಾಳ ಕೆರೆ ಬಳಿ ತಿರುವು ಪಡೆಯಲು ವಾಹನ ಸವಾರರಿಗೆ ಅನುವು ಮಾಡಿಕೊಡಲಾಗಿದೆ.
ಬಿಎಂಟಿಸಿ, ವಿಐಪಿ ಹಾಗೂ ಆ್ಯಂಬುಲೆನ್ಸ್ ವಾಹನಗಳ ಚಾಲನೆಗೆ ಬೆಳಗಿನ ಸಮಯದಲ್ಲಿ ಅವಕಾಶ ಮಾಡಿಕೊಡಲಾಗುವುದರಿಂದ ಕಾರ್ಯಾಚರಣೆಯನ್ನು ರಾತ್ರಿ 10.30ರಿಂದ ಬೆಳಗಿನ ಜಾವ 5.30ರವರೆಗೂ ನಡೆಸಲಾಗುತ್ತದೆ. ಹೀಗಾಗಿ ಕಾರ್ಯಾಚರಣೆಗೆ 3 ತಿಂಗಳು ಕಾಲಾವಕಾಶ ಬೇಕಾಗಿದೆ ಎಂದು ಬಿಎಂಆರ್'ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ಯಶವಂತ್ ಚಾವನ್ ಅವರು ಹೇಳಿದ್ದಾರೆ.