ರಾಜ್ಯ

ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರ, ಸ್ವಯಂ ಉದ್ಯೋಗಕ್ಕೆ ಆದ್ಯತೆ- ಗೋವಿಂದ ಎಂ. ಕಾರಜೋಳ 

Nagaraja AB

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯು  ಮುಂದಿನ ಆಯವ್ಯದಲ್ಲಿ ಶಿಕ್ಷಣ, ನೀರಾವರಿ, ಗಂಗಾಕಲ್ಯಾಣ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಪರಿಶಿಷ್ಟರು ಸ್ವಾವಲಂಭಿಗಳಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದ್ದಾರೆ

ಬೆಂಗಳೂರಿನಲ್ಲಿಂದು ಆದಿ ಜಾಂಬವ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಹಾಗೂ ಕಚೇರಿಯ ವೆಬ್ ಸೈಟ್ ಅನ್ನು  ಉದ್ಘಾಟಿಸಿ ಮಾತನಾಡಿದ ಅವರು, ಈ ನಿಗಮವು ಈ ಹಿಂದೆಯೇ ಪ್ರಾರಂಭಗೊಂಡಿದ್ದರೂ ಪೂರ್ಣ ಪ್ರಮಾಣದ ಸಿಬ್ಬಂದಿ ವರ್ಗ ಹಾಗು ಸೌಕರ್ಯಗಳಿಲ್ಲದ ಕಾರಣ ಪ್ರತ್ಯೇಕ ಕೇಂದ್ರ ಕಚೇರಿಯು ಇರಲಿಲ್ಲ. ಈಗ  ಪೂರ್ಣಪ್ರಮಾಣದ ಸಿಬ್ಬಂದಿ ಹಾಗೂ ಸೌಲಭ್ಯಗಳನ್ನು ಒದಗಿಸಿ ಪ್ರತ್ಯೇಕ ಕೇಂದ್ರ ಕಚೇರಿಯನ್ನು ಕಾರ್ಯಾರಂಭಿಸಲಾಗಿದೆ ಎಂದರು.

.ಈ ನಿಗಮದಿಂದ 2018- 19 ಹಾಗೂ 2019-20 ನೇ ಸಾಲಿನಲ್ಲಿ ಸಮಗ್ರ ಗಂಗಾ ಕಲ್ಯಾಣ ಯೋಜನೆಯಡಿ 4540 ಫಲಾನುಭವಿಗಳಿಗೆ 187.25 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಭೂ ಒಡೆತನ ಯೋಜನೆಯಡಿ 54 ಕೋಟಿ ರೂ. ವೆಚ್ಚದಲ್ಲಿ 285 ಫಲಾನುಭವಿಗಳಿಗೆ ಜಮೀನು ಖರೀದಿಸಿ ನೀಡಲಾಗಿದೆ. ಸಮೃದ್ಧಿ ಯೋಜನೆಯಡಿ 118 ಕೋಟಿ ರೂ. ವೆಚ್ಚದಲ್ಲಿ 1134 ಫಲಾನುಭವಿಗಳಿಗೆ ನೆರವು ನೀಡಲಾಗಿದೆ ಎಂದರು.

ಐರಾವತ ಯೋಜನೆಯಡಿ 86 ಕೋಟಿ ರೂ. ವೆಚ್ಚದಲ್ಲಿ 1640 ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸಲಾಗಿದೆ. ಸ್ವಯಂ ಉದ್ಯೋಗ ಯೋಜನೆಯಡಿ 54 ಕೋಟಿ ರೂ. ವೆಚ್ಚದಲ್ಲಿ 1310 ಫಲಾನುಭವಿಗಳಿಗೆ, ಮೈಕ್ರೋ ಕ್ರೆಡಿಟ್ ಯೋಜನೆಯಡಿ 24.53 ಕೋಟಿ ರೂ. ವೆಚ್ಚದಲ್ಲಿ 10000 ಫಲಾನುಭವಿಗಳಿಗೆ,  ಪ್ರಾರಂಭಿಕ ಷೇರು ಬಂಡವಾಳ ಯೋಜನೆಯಡಿ 10 ಕೋಟಿ ರೂ ಅನ್ನು ವಿನಿಯೋಗಿಸಲಾಗುತ್ತಿದೆ. ಫಲಾನುಭವಿಗಳು ಈ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸಾಮಾಜಿಕ ಹಾಗೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು ಎಂದರು.

 ರಾಜ್ಯ ಪರಿಷತ್ತಿನ ಸಭೆಯಲ್ಲಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಅನುಮೋದಿಸಿದ 30,445 ಕೋಟಿ ರೂ. ವೆಚ್ಚದ  ಎಲ್ಲಾ ಕಾರ್ಯಕ್ರಮಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಈ ಯೋಜನೆಗಳ ಕುರಿತು ಮುಖ್ಯಮಂತ್ರಿಗಳು ಹಾಗೂ ತಾವು ಪ್ರಗತಿ ಪರಿಶೀಲನೆ ನಡೆಸಿದ್ದು, ಯಾವುದೇ ಅನುದಾನ ಲ್ಯಾಪ್ಸ್ ಆಗದಂತೆ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ತಿಳಿಸಿದರು. 

SCROLL FOR NEXT