ರಾಜ್ಯ

ಪೌರತ್ವ ತಿದ್ದುಪಡಿ ಕಾಯಿದೆ ಮಹಾತ್ಮಾ ಗಾಂಧೀಜಿ ಕನಸಾಗಿತ್ತು: ರಾಜನಾಥ್ ಸಿಂಗ್

Lingaraj Badiger

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು. ಗಾಂಧಿ ಕನಸನ್ನು ಬಿಜೆಪಿ ನನಸು ಮಾಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.

ಇಂದು ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆದ ಸಿಎಎ ಪರವಾದ ಬಿಜೆಪಿ ಜನಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯಿದೆ - ಸಿಎಎ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ - ಎನ್‌ಆರ್‌ಸಿ ವಿಷಯದಲ್ಲಿ ವಿರೋಧ ಪಕ್ಷಗಳು ದೇಶ ವಿಭಜಿಸುವ ಕೆಲಸ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಯತ್ನಿಸಿದ್ದು ಕಾಂಗ್ರೆಸ್. ಬಿಜೆಪಿ ದೇಶದ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು, ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಧ್ವಜ ಇರಬಾರದು. ಭಾರತಕ್ಕೆ ಇರುವುದು ಒಂದೇ ತ್ರಿವರ್ಣ ಧ್ವಜ. ದೇಶ ವಿಭಜನೆ ನಂತರ ಪಶ್ಚಿಮ ಪಾಕಿಸ್ತಾನದಿಂದ ಬಂದ ಹಿಂದೂ ಮತ್ತು ಸಿಖ್ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತ ವಲಸಿಗರಿಗೆ ಅಂದಿನ ಕಾಂಗ್ರೆಸ್ ಸರ್ಕಾರ ಏಕೆ ಪೌರತ್ವ ನೀಡಲಿಲ್ಲ ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದರು. 

ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಪಾರ್ಸಿ, ಜೈನ, ಕ್ರೈಸ್ತ ಸಮುದಾಯಗಳ ಜನರಿಗೆ ಧಾರ್ಮಿಕ ಪೀಡನೆಯಾಗಿ ಅವರು ಭಾರತಕ್ಕೆ ಆಶ್ರಯ ಕೋರಿ ಬಂದರೆ ಅಂತವರಿಗೆ ಭಾರತದ ಪೌರತ್ವ ನೀಡಬೇಕು ಎಂದು ಮಹಾತ್ಮ ಗಾಂಧಿಯವರು ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ಸೂಚನೆ ನೀಡಿದ್ದರು. ಗಾಂಧೀಜಿಯ ಕನಸನ್ನು ಬಿಜೆಪಿ ಇದೀಗ ನನಸುಗೊಳಿಸಿದೆ ಎಂದರು.

ನಾವು ಪ್ರಣಾಳಿಕೆಯಲ್ಲಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ರಾಮಮಂದಿರ ನಿರ್ಮಾಣ, ಜಮ್ಮು ಕಾಶ್ಮೀರದ 370 ವಿಧಿ ರದ್ದತಿ ಮಾಡಿದ್ದೇವೆ. ಶೀಘ್ರವೇ ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಿಸಲಿದ್ದೇವೆ, ನೀವು ಇನ್ನು ಪ್ರಾರ್ಥನೆ ಸಲ್ಲಿಸಬಹುದು. ಈ ಹಿಂದೆ ತಲಾಖ್ ಮೂಲಕ ಮುಸ್ಲಿಂ ಹೆಣ್ಮಕ್ಕಳು ತೊಂದರೆ ಅನುಭವಿಸುತ್ತಿದ್ದರು. ನಾವು ಅಧಿಕಾರಕ್ಕೆ ಬಂದ ನಂತರ ತ್ರಿವಳಿ ತಲಾಖ್ ರದ್ದು ಮಾಡಿದ್ದೇವೆ ಎಂದರು.

370ನೇ ವಿಧಿ ರದ್ದುಗೊಳಿಸಿದ್ದನ್ನು ಸಮರ್ಥಿಸಿಕೊಂಡ ರಕ್ಷಣಾ ಸಚಿವರು, ಕಾಶ್ಮೀರಿ ಪಂಡಿತರು ಮತ್ತೆ ಕಣಿವೆ ರಾಜ್ಯಕ್ಕೆ ಮರಳುವುದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದರು.

SCROLL FOR NEXT