ರಾಜ್ಯ

ಬಂಡೀಪುರ ಅರಣ್ಯದಲ್ಲಿ ರಜನಿಕಾಂತ್: ಬೇರ್ ಗ್ರಿಲ್ಸ್ ಜೊತೆ 'ಮ್ಯಾನ್ ವರ್ಸಸ್ ವೈಲ್ಡ್ ’ಸಾಕ್ಷ್ಯಚಿತ್ರದಲ್ಲಿ ಭಾಗಿ 

Sumana Upadhyaya

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾನ್ ವರ್ಸಸ್ ವೈಲ್ಡ್ ಸರಣಿ ಸಾಕ್ಷ್ಯಚಿತ್ರ ತಯಾರಕ, ಇಂಗ್ಲೆಂಡ್ ಮೂಲದ ಸಾಹಸಿಗ ಬೇರ್ ಗ್ರಿಲ್ಸ್ ಮತ್ತು ಅವರ ತಂಡದ ಜೊತೆ ರಜನಿಕಾಂತ್ ಅವರು ಸಾಕ್ಷ್ಯಚಿತ್ರ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಇಂದು ಆರು ಗಂಟೆಗಳ ಕಾಲ ಅವರ ಜೊತೆ ಮತ್ತು ಗುರುವಾರ ಇನ್ನೊಬ್ಬ ಸೆಲೆಬ್ರಿಟಿ ಜೊತೆ ಶೂಟಿಂಗ್ ಗೆ ಇಲ್ಲಿ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಇಂದು ಮತ್ತು ನಾಡಿದ್ದು ಗುರುವಾರ 6 ಗಂಟೆಗಳ ಶೂಟಿಂಗ್ ಗೆ ಸಮಯ ನೀಡಲಾಗಿದೆ. ಇಂದು ರಜನಿಕಾಂತ್ ಮತ್ತು ನಾಡಿದ್ದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾಗಿಯಾಗಲಿದ್ದಾರೆ ಎಂದರು.


ಕೇರಳದ ಸುಲ್ತಾನ್ ಬಟ್ಟೆರಿ ಹೆದ್ದಾರಿ, ಮುಲ್ಲೆಹೊಲೆ, ಮದ್ದೂರು ಮತ್ತು ಕಲ್ಕೆರೆ ಅರಣ್ಯ ಭಾಗಗಳಲ್ಲಿ ಶೂಟಿಂಗ್ ನಡೆಯಲಿದೆ. ಪ್ರವಾಸಿಗರು ಬಾರದಿರುವ ಪ್ರದೇಶಗಳನ್ನು ನೋಡಿಕೊಂಡು ಶೂಟಿಂಗ್ ಮಾಡುತ್ತಿದ್ದಾರೆ. ಕರ್ನಾಟಕದ ವನ್ಯಜೀವಿ ಸಂಕುಲಗಳ ಶೂಟಿಂಗ್ ಗೆ ಸಮಯ ನೀಡಿದಂತೆ ಇದಕ್ಕೆ ಸಹ ನೀಡಲಾಗಿದೆ. ಇದರಿಂದ ಪ್ರವಾಸಿಗರಿಗೆ, ಅರಣ್ಯ ಗಸ್ತು ತಿರುಗುವವರಿಗೆ, ಅಗ್ನಿಶಾಮಕ ಸಿಬ್ಬಂದಿ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ, ಅರಣ್ಯ ಇಲಾಖೆಯ ವಿಶೇಷ ಭದ್ರತೆಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಆದರೆ ಇದಕ್ಕೆ ಪರಿಸರ ಮತ್ತು ಅರಣ್ಯ ಸಂರಕ್ಷಕರು ವಿರೋಧ ವ್ಯಕ್ತಪಡಿಸುತ್ತಾರೆ. ಈ ರೀತಿ ಸಿನಿಮಾ, ಸಾಕ್ಷ್ಯಚಿತ್ರಗಳಿಗೆ ಅನುಮತಿ ನೀಡಿದರೆ ಹೆಚ್ಚೆಚ್ಚು ಮಾನವ-ಪ್ರಾಣಿ ಸಂಘರ್ಷಗಳು ಏರ್ಪಟ್ಟು ವನ್ಯಜೀವಿಗಳಿಗೆ ತೊಂದರೆಯಾಗುತ್ತವೆ ಎನ್ನುತ್ತಾರೆ.

ಉತ್ತರ ಭಾರತದ ಅರಣ್ಯ ಪ್ರದೇಶಗಳಲ್ಲಿ ಬೇರ್ ಗ್ರಿಲ್ಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಶೂಟಿಂಗ್ ನಲ್ಲಿ ತೊಡಗಿ ವ್ಯಾಪಕ ಸುದ್ದಿಯಾಗಿತ್ತು. 

SCROLL FOR NEXT