ರಾಜ್ಯ

ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಮಹತ್ತರ ಜವಾಬ್ದಾರಿ ಹೊತ್ತಿರುವ ಪತ್ರಕರ್ತರಿಗೆ ಶುಭಾಶಯ: ಯಡಿಯೂರಪ್ಪ

Shilpa D

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರಿಕಾ ದಿನದ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಮಾಜ ಕಟ್ಟುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಮಾಧ್ಯಮಗಳನ್ನು ಮುನ್ನೆಡೆಸುವ ಎಲ್ಲಾ ಪತ್ರಕರ್ತ ಬಂಧುಗಳಿಗೆ 'ಪತ್ರಿಕಾ ದಿನ'ದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಕನ್ನಡದ ಮೊದಲ ಪತ್ರಿಕೆ "ಮಂಗಳೂರು ಸಮಾಚಾರ' ಆರಂಭವಾದ ಜುಲೈ ಒಂದನೇ ತಾರೀಕಿನಿಂದ ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಮೂಲಕ ಪತ್ರಕರ್ತರು ರೂಪಿಸುವ ಸಾಮಾಜಿಕ ಅಭಿಪ್ರಾಯಗಳಿಗೆ ತುಂಬಾ ಮಹತ್ವವಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವಿನ ಕೊಂಡಿಯಂತೆ ಕೆಲಸ ಮಾಡುವ ಪತ್ರಿಕಾರಂಗವು, ಪ್ರಜಾಪ್ರಭುತ್ವವನ್ನು ಬಲಗೊಳಿಸುವ ವಿಚಾರಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ. ಇಂತಹ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಪತ್ರಕರ್ತ ಪರಿವಾರಕ್ಕೆ ಮತ್ತೊಮ್ಮೆ ಶುಭಾಶಯಗಳು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಶುಭಕೋರಿ, ಎಲ್ಲಾ ಪತ್ರಕರ್ತ ಬಂಧುಗಳಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು. ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುವ ಮಾಧ್ಯಮಗಳನ್ನು ಮುನ್ನೆಡೆಸುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲರಿಗೂ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಟ್ವೀಟ್ ಮಾಡಿ, ಜನರಲ್ಲಿ ತಾವು ಮೂಡಿಸಿದ ಜಾಗೃತಿ, ಅರಿವು ಸೋಂಕನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗಿದೆ. ಸರಕಾರ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕ ಸೇತುವೆಯಾಗಿ, ಸಮಾಜದ ಅಂಕುಡೊಂಕುಗಳ ಚಿಕಿತ್ಸಕರಾಗಿ ದುಡಿಯುತ್ತಿರುವ ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರಿಕಾ ದಿನದ ಶುಭಾಶಯ ಕೋರಿದ್ದಾರೆ. ಸುಳ್ಳು,ಅಪಪ್ರಚಾರ ವಿಜೃಂಭಿಸುತ್ತಿರುವ ವರ್ತಮಾನದ ದಿನಗಳಲ್ಲಿ ಸತ್ಯಶೋಧಿಸುವ, ಧೈರ್ಯದಿಂದ ಅಭಿವ್ಯಕ್ತಿಸುವ ಮಾಧ್ಯಮದ ಶಕ್ತಿ ಪ್ರಜ್ವಲವಾಗಿ ಬೆಳಗಲಿ. ನನ್ನ ಸಮಸ್ತ  ಪತ್ರಕರ್ತ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

SCROLL FOR NEXT