ರಾಜ್ಯ

ಗಂಗಾವತಿ: ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಸೋಂಕು; ನೂರಾರು ವಿದ್ಯಾರ್ಥಿ, ಪಾಲಕರಲ್ಲಿ ಆತಂಕ

Vishwanath S

ಗಂಗಾವತಿ: ತನ್ನ ಸಹಪಾಠಿಗಳೊಂದಿಗೆ ಕಳೆದ ಎರಡು ಪರೀಕ್ಷೆಗಳನ್ನು ಒಟ್ಟಿಗೆ ಬರೆದಿದ್ದ ವಿದ್ಯಾರ್ಥಿ‌ನಿಯಲ್ಲಿ ಸೋಂಕು ದೃಢಪಟ್ಟ ಘಟನೆ ಕಾರಟಗಿಯಲ್ಲಿ ನಡೆದಿದೆ.

ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಕೊರೋನಾ ಖಚಿತವಾದ ಪರಿಣಾಮ, ಪರೀಕ್ಷೆಯ ಬರೆಯುವುದನ್ನು ಮೊಟಕುಗೊಳಿಸಿ ಚಿಕಿತ್ಸೆಗಾಗಿ ವಿದ್ಯಾರ್ಥಿನಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದ ಘಟನೆ ನಡೆಯಿತು.

ಕೊರೋನಾ ಸೋಂಕಿತ 10 ನೇ ತರಗತಿ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗಿದ್ದು ನೂರಾರು ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಈಗ ಆತಂಕ ಶುರುವಾಗಿದೆ.

ಕಾರಟಗಿಯ ಖಾಸಗಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಸೋಂಕಿತೆ ಕಳೆದ ಎರಡು ಪರೀಕ್ಷೆಗಳನ್ನ ಎಲ್ಲರಂತೆ ಸಾಮೂಹಿಕವಾಗಿ ಖಾಸಗಿ ಶಾಲೆಯ ರೂಂನಲ್ಲಿ ಬರೆದಿದ್ದಳು. ಬುಧವಾರ ಕೂಡ ಅದೇ ರೀತಿ ಪರೀಕ್ಷೆಗೆ ಹಾಜರಾಗಿದ್ದ ವೇಳೆ ವಿದ್ಯಾರ್ಥಿನಿಗೆ ಸೋಂಕು ದೃಢಪಟ್ಟ ರಿಪೋರ್ಟ್ ಬಂದಿದೆ.
ವರದಿ ಬರುತ್ತಿದ್ದಂತೆ ವಿದ್ಯಾರ್ಥಿನಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಯಿತಾದರೂ ಸೋಂಕಿನಿಂದ ಭಯಭೀತಳಾದ ವಿದ್ಯಾರ್ಥಿನಿ ಪರೀಕ್ಷೆ ಅರ್ಧಕ್ಕೆ ನಿಲ್ಲಿಸಿ ಆಂಬ್ಯುಲನ್ಸ್‌ನಲ್ಲಿ ಚಿಕಿತ್ಸೆಗೆ ತೆರಳಿದ್ದಾಳೆ.

ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕೂಲಿ ಅರಸಿ ತೆರಳಿದ್ದ ತಂದೆ ತಾಯಿ ಜೊತೆ ತೆರಳಿದ್ದ ವಿದ್ಯಾರ್ಥಿನಿ, ಪರೀಕ್ಷೆ ಇದ್ದುದರಿಂದ ಕಾರಟಗಿಯ ತಮ್ಮ ನಿವಾಸಕ್ಕೆ ಬಾರದೆ ಸಿಂಧನೂರಿನಲ್ಲಿನ ಅವರ ಚಿಕ್ಕಮ್ಮಳ ಮನೆಯಲ್ಲಿ ಉಳಿದಿದ್ದಳು. ಅಲ್ಲಿಂದ ಪರೀಕ್ಷೆಗೆ ಬರುತ್ತಿದ್ದಳು.

ಬೆಂಗಳೂರಿನಿಂದ ಬಂದಿದ್ದ ವಿದ್ಯಾರ್ಥಿನಿಯ ಸ್ವಾಬ್ ಟೆಸ್ಟ್ ಮಾಡಲಾಗಿತ್ತು. ಈ ವಿಷಯವನ್ನ ಪರೀಕ್ಷಾ ಕೇಂದ್ರದಲ್ಲಿ ಹೇಳದೆ ಇರೋದ್ರಿಂದ ಇಷ್ಟೆಲ್ಲ ಆತಂಕಕ್ಕೆ ಕಾರಣವಾಗಿದೆ. ಸದ್ಯ ಸೋಂಕಿತ ವಿದ್ಯಾರ್ಥಿನಿ ಸಂಪರ್ಕದಲ್ಲಿದ್ದ ರೂಂ ನಂಬರ್ ಒಂದರಲ್ಲಿನ 18 ವಿದ್ಯಾರ್ಥಿಗಳು, 4 ಜನ‌ ರೂಂ ಸೂಪರ್‌ವೈಜರ್‌ನ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ ಎಂದು ಕೊಪ್ಪಳ ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಮಾಹಿತಿ ನೀಡಿದರು.

ವರದಿ: ಶ್ರೀನಿವಾಸ ಎಂಜೆ

SCROLL FOR NEXT