ಗಂಗಾವತಿ: ಸಂಬಂಧಗಳ ಘರ್ಷಣೆಯಲ್ಲಿ ಸಂತ್ರಸ್ತಳಾಗಿ ಇದೀಗ ಕಾನೂನಿನ ರಕ್ಷಣೆ ಮತ್ತು ಪೋಷಣೆಯಲ್ಲಿರುವ ಅಪ್ರಾಪ್ತ ಬಾಲಕಿ ಮತ್ತು ಆಕೆಗೆ ಜನಿಸಿ ಮಗುವಿನ ಚಿತ್ರವನ್ನು ಅಕ್ರಮವಾಗಿ ಬಳಸಿಕೊಂಡು ಸಾಮಾಜಿಕ ತಾಣಕ್ಕೆ ಅಪ್ಲೋಡ್ ಮಾಡಿದ ಪ್ರಕರಣವೊಂದು ಠಾಣೆಯ ಮೆಟ್ಟಿಲೇರಿದೆ.
ಗಂಗಾವತಿ ತಾಲ್ಲೂಕಿನ ಉಡುಮಕಲ್ ಗ್ರಾಮದ ನಿವಾಸಿ ಬಸವರಾಜ ಬೋದೂರು ಎಂಬ ಆರೋಪಿಯ ಮೇಲೆ ಇದೀಗ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ, ಮಕ್ಕಳ ರಕ್ಷಣಾ ಅಧಿಕಾರಿ ಸಿಂಧು ಅಂಗಡಿ ಎಂಬುವವರು ದೂರು ದಾಖಲಿಸಿದ್ದಾರೆ.
ಘಟನೆಯ ಹಿನ್ನೆಲೆ:
ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾದ ಪ್ರಕರಣದಲ್ಲಿನ ಸಂತ್ರಸ್ತ ಬಾಲಕಿ ಹಾಗೂ ಆಕೆ ಜನ್ಮ ನೀಡಿದ ಮಗುವಿನ ಚಿತ್ರವನ್ನು ಟಿಕ್ಟಾಕ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲೆ ದೂರು ದಾಖಲಿಸಲಾಗಿದೆ.
ತಂದೆಯ ಅನೈತಿಕ ಸಂಬಂಧಿಂದಾಗಿ ಅಪ್ರಾಪ್ತ ವಯಸ್ಸಿನ ಮಗಳು ಗರ್ಭಧರಿಸಿದ ಪ್ರಕರಣವೊಂದು ತಾಲ್ಲೂಕಿನಲ್ಲಿ ಇತ್ತೀಚೆಗೆ ಪತ್ತೆಯಾಗಿತ್ತು. ಅಪ್ರಾಪ್ತ ಬಾಲಕಿ ಹಾಗೂ ಆಕೆಗೆ ಜನಿಸಿದ ಮಗುವಿನ ಚಿತ್ರವನ್ನು ಈ ಆರೋಪಿ ಸಂಗ್ರಹಿಸಿ ಟಿಕ್ಮಾಡಿ ವಾಟ್ಸಾಪ್ ನಲ್ಲಿ ಹರಿಯಬಿಟ್ಟಿದ್ದ.
ಈ ಪ್ರಕರಣವನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನೀಲೋಫರ್ ರಾಂಪುರೆ ಹಾಗೂ ಸಮಾಲೋಚಕಿ ನೇತ್ರಾವತಿ ಗಮನಿಸಿದ್ದಾರೆ. ಮಕ್ಕಳ ಭವಿಷ್ಯ ಹಾಗೂ ಘನತೆಗೆ ಧಕ್ಕೆ ಉಂಟಾಗುವ ಪ್ರಕರಣ ಎಂದು ಪರಿಗಣಿಸಿ ದೂರು ನೀಡಲು ಮಕ್ಕಳ ಕಲ್ಯಾಣ ಸಮಿತಿಗೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆ ಆರೋಪಿ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಗೆ ಜನಿಸಿ ಮಗು ಕಾನೂನು ರಕ್ಷಣೆ ಮತ್ತು ಫೋಷಣೆಯಲ್ಲಿರುವ ಸಂದರ್ಭದಲ್ಲಿ ವಿಡಿಯೋ, ಫೊಟೋ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿರುವುದು ಅಪರಾಧ ಎಂದು ಉಲ್ಲೇಖಿಸಿ ದೂರು ದಾಖಲಿಸಲಾಗಿದೆ.
ವರದಿ: ಶ್ರೀನಿವಾಸ್ ಎಂ.ಜೆ.