ರಾಜ್ಯ

ಕಳವು ಆರೋಪದಡಿ ಮರಳು ಕಲಾವಿದೆ ಎಂ ಎನ್ ಗೌರಿ ಬಂಧನ: ಜಾಮೀನಿನ ಮೇಲೆ ಬಿಡುಗಡೆ

Raghavendra Adiga

ಮೈಸೂರು: ನಂಜನಗೂಡು ತಹಸೀಲ್ದಾರ್ ನೀಡಿದ ದೂರಿಗೆ ಸಂಬಂಧಿಸಿ ನಗರ ಮೂಲದ ಖ್ಯಾತ ಮರಳು ಕಲಾವಿದೆ ಎಂ ಎನ್‍ ಗೌರಿ ಅವರನ್ನು ಬಿಳಿಗೆರೆ ಪೊಲೀಸರು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಒಂದೆರಡು ದಿನಗಳ ಹಿಂದೆ ಬಿಳಿಗೆರೆ ಬಳಿಯ ಹರಿಹರಪುರದ ಸೋಮೇಶ್ವರ ದೇವಸ್ಥಾನದ ಮುಂಭಾಗದಲ್ಲಿನ ಹೊಲದಿಂದ ಮೂರು ಅಡಿ ಎತ್ತರದ ವೀರಭದ್ರೇಶ್ವರ ಶಿಲ್ಪವನ್ನು ಗೌರಿ ಹೊರತೆಗೆದಿದ್ದರು. ಗ್ರಾಮಸ್ಥರು ಈ ಮಾಹಿತಿಯನ್ನು ತಹಶೀಲ್ದಾರ್‌ಗೆ ತಿಳಿಸಿದ್ದರು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ತಹಶೀಲ್ದಾರ್ ನೀಡಿದ ದೂರಿನ ನಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಗೌರಿ ಅವರ ಬಳಿ ವೀರಭದ್ರ ಮೂರ್ತಿ ಪತ್ತೆಯಾಗಿದೆ. ವಿಗ್ರಹ ವಶಕ್ಕೆ ಪಡೆದು  ಗೌರಿ ವಿರುದ್ಧ ಐಪಿಸಿ ಸೆಕ್ಷನ್ 379 ಅನ್ವಯ ಕಳವು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.  ಈ ವೇಳೆ ಗೌರಿ ತಾವು ವಿಗ್ರಹವನ್ನು ತು ಪ್ರಾಚ್ಯ ವಸ್ತು ಇಲಾಖೆಯ ವಶಕ್ಕೆ ನೀಡಬೇಕೆಂದಿದ್ದಾಗಿ ಹೇಳಿಕೆ ಕೊಟ್ಟಿದ್ದಾರೆ. 

ಹರಿಹರಪುರದ ಸೋಮೇಶ್ವರ ದೇವಾಲಯ ಪ್ರಾಚೀನ ಕಾಲದ ದೇವಾಲಯವಾಗಿದ್ದು ಚೋಳರ ಕಾಲದಲ್ಲಿ ಈ ಪ್ರದೇಶದಲ್ಲಿ ಗಾಣಿಗರು ವಾಸವಿದ್ದರು, ಅವರಿಗೆ ಸೇರಿದ್ದೆನ್ನಲಾದ ಪ್ರಾಚೀನ ಶಿಲ್ಪಗಳು ಈ ಸುತ್ತಮುತ್ತ ಹೇರಳ ಸಂಖ್ಯೆಯಲ್ಲಿದೆ. 

SCROLL FOR NEXT