ರಾಜ್ಯ

ಕೊಪ್ಪಳ: ಸಾಮಾಜಿಕ ಅಂತರಕ್ಕಾಗಿ ಸಿಮೆಂಟ್ ರಿಂಗ್ ಇಟ್ಟು ಉಪನೋಂದಣಾಧಿಕಾರಿ ಎಡವಟ್ಟು!

Srinivasamurthy VN

ಕೊಪ್ಪಳ: ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಏನೊ ಮಾಡಲು ಹೋಗಿ ಮತ್ತೇನೊ ಮಾಡಿಕೊಂಡಿದ್ದಾರೆ ಕೊಪ್ಪಳದ ಉಪನೋಂದಣಾಧಿಕಾರಿ ರುದ್ರಮೂರ್ತಿ!

ಇದು ಕೋವಿಡ್-19 ಕಾಲ.  ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ, ಸ್ಯಾನಿಟೈಜರ್ ಉಪಯೋಗಿಸುವುದು ಕೋವಿಡ್-19 ನಿಗ್ರಹಕ್ಕಿರುವ ಮಾರ್ಗ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಏನೊ ಮಾಡಲು ಹೋಗಿ ಮತ್ತೇನೊ ಮಾಡಿಕೊಂಡಿದ್ದಾರೆ ಕೊಪ್ಪಳದ ಉಪನೋಂದಣಾಧಿಕಾರಿ ರುದ್ರಮೂರ್ತಿ.

ಹೌದು.. ಕೊಪ್ಪಳದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಾಮಾಜಿಕ ಅಂತರಕ್ಕಾಗಿ ಎಡವಟ್ಟು ನಡೆದಿದೆ. ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬರುವ ಸಾರ್ವಜನಿಕರು ಎರಡು ಗಜ ಇಲ್ಲವೇ ಮೂರು ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಎಲ್ಲೆಡೆ ಹೇಳಲಾಗುತ್ತದೆ. ಆದರೆ ಬಹುತೇಕ ಕಡೆ ಇದು ಪಾಲನೆಯಾಗದಿರುವುದು ಕಂಡು ಬರುವುದೇ ಜಾಸ್ತಿ. ಅದಕ್ಕಾಗಿ ಉಪನೋಂದಣಾಧಿಕಾರಿ ರುದ್ರಮೂರ್ತಿ ಅವರಿಗೆ ಯಾರು ಹೇಳಿದರೊ ಗೊತ್ತಿಲ್ಲ ಸುಮಾರು ಒಂದೂವರೆ ಅಡಿ ಎತ್ತರದ ಸಿಮೆಂಟ್ ರಿಂಗ್ ಮಾಡಿಸಿದ್ದಾರೆ!

ಕಚೇರಿಯೊಳಗೆ ಎತ್ತರದ ಸಿಮೆಂಟ್ ರಿಂಗ್ ಹಾಕಿಸಿ ಜನರನ್ನು ಆ ರಿಂಗ್‌ನೊಳಗೆ ನಿಲ್ಲಲು ಸೂಚಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡ ಖುಷಿಯಲ್ಲಿ ಕೆಲಸ ಮಾಡಲಾಗುತ್ತಿತ್ತು. ಆದರೆ ವಯಸ್ಸಾದವರು, ಅಂಗವಿಕಲರು ಈ ರಿಂಗ್‌ನೊಳಗಡೆ ನಿಂತು ಆಯತಪ್ಪಿ ಬಿದ್ದು ಗಾಯಗೊಂಡದ್ದೇ ಹೆಚ್ಚು.

ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಅವೈಜ್ಞಾನಿಕ ಆಲೋಚನೆಗಳ ಅನುಷ್ಠಾನ ಎಷ್ಟರಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.

ವರದಿ: ಬಸವರಾಜ ಕರುಗಲ್

SCROLL FOR NEXT