ರಾಜ್ಯ

ಆನ್ ಲೈನ್ ಶಿಕ್ಷಣ ಗೊಂದಲ: ಸೋಮವಾರ ತಜ್ಞರ ಸಮಿತಿ ವರದಿ ಸಲ್ಲಿಕೆ

Shilpa D

ಬೆಂಗಳೂರು: ಶಾಲಾ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣಕ್ಕೆ ಸಂಬಂಧಿಸಿ ರಚಿಸಲಾಗಿರುವ ತಜ್ಞರ ಸಮಿತಿ ತನ್ನ ಸಮಾಲೋಚನೆ ಕಾರ್ಯ ಪೂರ್ಣಗೊಳಿಸಿದ್ದು, ಜುಲೈ 6ರ ಸೋಮವಾರ ವರದಿ ಸಲ್ಲಿಸಲಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ಹೈಕೋರ್ಟ್‌ಗೆ ತಿಳಿಸಿದೆ. 

ರಾಜ್ಯದಲ್ಲಿ 1ರಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಿಷೇಧಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ  ಕೆಲ ವಿದ್ಯಾರ್ಥಿಗಳ ಪಾಲಕರು ಸಲ್ಲಿಸಿರುವ ಪಿಐಎಲ್‌ ಸಿಜೆ ಎ.ಎಸ್‌. ಓಕಾ ಮತ್ತು ರಂಗಸ್ವಾಮಿ ನಟರಾಜನ್ ಅವರನ್ನೊಳಗೊಂಡ  ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.

ಈ ಸಂಬಂಧ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಈ ಮಾಹಿತಿ ನೀಡಿದರು. ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಉದಯ ಹೊಳ್ಳ ''ಆನ್‌ಲೈನ್‌ ಶಿಕ್ಷಣ ನಿಷೇಧಿಸಿರುವ ಸರ್ಕಾರದ ಕ್ರಮವು ಕರ್ನಾಟಕ ಶಿಕ್ಷಣ ಕಾಯಿದೆ ಮತ್ತು ಸಂವಿಧಾನದ ಉಲ್ಲಂಘನೆಯಾಗಿದೆ. ಬಹುತೇಕ ಕಡೆ ಆನ್‌ಲೈನ್‌ ಶಿಕ್ಷಣ ನೀಡಲಾಗುತ್ತಿದೆ. ಕೇಂದ್ರ ಸರಕಾರ
ಕೂಡ ತನ್ನ ಹಿಂದಿನ ಮಾರ್ಗಸೂಚಿಗಳಲ್ಲಿ ಆನ್‌ಲೈನ್‌ ಶಿಕ್ಷಣ ಇರಬೇಕು ಎಂದು ಹೇಳಿದೆ,'' ಎಂದು ವಾದಿಸಿದರು.

ಪುಟಾಣಿ ಮಕ್ಕಳ ಆರೋಗ್ಯವನ್ನ ಮುಂದಿಟ್ಟುಕೊಂಡು ಸರಕಾರ 1ರಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣವನ್ನ ನಿಷೇಧಿಸಿತ್ತು. ಅಲ್ಲದೇ ಪುಟಾಣಿಗಳಿಗೆ ಆನ್‌ಲೈನ್‌ ತರಗತಿ ನೀಡುವ ಶಾಲೆಗಳ ವಿರುದ್ಧವು ಕಿಡಿಕಾರಿತ್ತು.

ಪೋಷಕರಿಂದಲೇ ವಿರೋಧ ವ್ಯಕ್ತವಾದ ಬೆನ್ನಲ್ಲೆ ಸರಕಾರ ಆನ್‌ಲೈನ್‌ ಶಿಕ್ಷಣಕ್ಕೆ ಸಂಬಂಧಿಸಿ ತಜ್ಞರ ಸಮಿತಿ ರಚಿಸಿದೆ.ಈ ಬಗ್ಗೆ ಪರಿಣಿತರ ವರದಿ ಆದರಿಸಿ ಸರಕಾರ ನಿರ್ಧಾರ ಕೈಗೊಳ್ಳಲಿದೆ.

SCROLL FOR NEXT