ರಾಜ್ಯ

ಕೊರೋನಾ ವೈರಸ್ ಎಫೆಕ್ಟ್: ಲಾಲ್ ಬಾಗ್ `ಫಲಪುಷ್ಪ' ಪ್ರದರ್ಶನ ರದ್ದು!

Srinivasamurthy VN

ಬೆಂಗಳೂರು: ಮಾರಕ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿರುವಂತೆಯೇ ಇತ್ತ ರಾಜ್ಯ ಸರ್ಕಾರ ಸ್ವಾತಂತ್ರ್ಯೋತ್ಸವ ನಿಮಿತ್ತ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನವನ್ನು ರದ್ದುಪಡಿಸಲು ಮುಂದಾಗಿದೆ.

ಹೌದು.. ದಿನೇ ದಿನೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇದೇ ಕಾರಣಕ್ಕೆ ತೋಟಗಾರಿಕೆ ಇಲಾಖೆ ಲಾಲ್ ಭಾಗ್ ನಲ್ಲಿ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನವನ್ನು ರದ್ದು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. 

ಲಾಲ್ ಭಾಗ್ ನ ಫಲಪುಷ್ಪ ಪ್ರದರ್ಶನ ವ್ಯಾಪಕ ಖ್ಯಾತಿ ಗಳಿಸಿದ್ದು, ಬೆಂಗಳೂರು ಮಾತ್ರವಲ್ಲದೇ ದೇಶದ ವಿವಿಧ ಮೂಲೆ ಮೂಲೆಗಳಿಂದ ಸಾವಿರಾರು ಜನರು ಇಲ್ಲಿಗೆ ಆಗಮಿಸಿ ಫಲಪುಷ್ಪ ಪ್ರದರ್ಶನ ವೀಕ್ಷಿಸುತ್ತಾರೆ. ಆದರೆ ಪ್ರಸ್ತುತ ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಗಣನೀಯವಾಗಿ  ಏರಿಕೆಯಾಗುತ್ತಿದ್ದು, ಪ್ರದರ್ಶನ ಏರ್ಪಡಿಸಿದರೆ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಭೀತಿ ಹಿನ್ನಲೆಯಲ್ಲಿ ಮತ್ತು ಜನ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರದರ್ಶನವನ್ನು ರದ್ದು ಪಡಿಸುವ ಕುರಿತು ಇಲಾಖೆ ಗಂಭೀರ ಚಿಂತನೆಯಲ್ಲಿದೆ.

ಮೈಸೂರು ಉದ್ಯಾನ ಕಲಾ ಸಂಘ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಪ್ರತಿ ಬಾರಿಯ ಪ್ರದರ್ಶನದಲ್ಲೂ ಒಂದು ವಿಷಯದ ಆಧಾರದಲ್ಲಿ ಕಲಾಕೃತಿಗಳನ್ನು ಹೂವುಗಳಲ್ಲಿ ರಚಿಸಲಾಗುತ್ತದೆ. ಆದರೆ ಈ ಬಾರಿ ಸೋಂಕಿನ ನಡುವೆ ಫಲಪುಷ್ಪ ಪ್ರದರ್ಶನ ನಡೆಸಿದರೆ ಪ್ರದರ್ಶನ ವೀಕ್ಷಿಸಲು ಲಕ್ಷಾಂತರ ಜನರು  ಉದ್ಯಾನಕ್ಕೆ ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಈ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.
 

SCROLL FOR NEXT