ರಾಜ್ಯ

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡುವುದಿಲ್ಲ,ಬೆಂಗಳೂರು ಬಿಟ್ಟು ಊರಿಗೆ ತೆರಳಬೇಡಿ : ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ, ಹಾಗೆಯೇ ಬೆಂಗಳೂರು ತೊರೆಯಬೇಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜನತೆಗೆ ಮನವಿ ಮಾಡಿದ್ದಾರೆ.

ಜನರು ಆತಂಕ ಹಾಗೂ ಲಾಕ್ ಡೌನ್ ಭೀತಿ ಯಿಂದ ನಗರವನ್ನು ಬಿಟ್ಟು ತಮ್ಮ ಊರುಗಳ ಕಡೆ ಮುಖ ಮಾಡಿದ್ದಾರೆ. ಇದರಿಂದ ಜಿಲ್ಲೆಗಳಿಗೆ ಹಾಗೂ ಹಳ್ಳಿಗಳಲ್ಲಿ ಸೋಂಕಿನ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ಜನರು ದಯವಿಟ್ಟು ಬೆಂಗಳೂರಿನಲ್ಲಿ ಸುರಕ್ಷತೆಯಿಂದ ಇರಿ. ಸರ್ಕಾರ ಲಾಕ್ಡೌನ್ ಮಾಡುವುದಿಲ್ಲ. ಲಾಕ್ಡೌನ್  ಆಗುತ್ತದೆ ಎಂಬ ಭಯ ಪಡಬೇಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಣಯದಂತೆ ಪ್ರತಿ ಭಾನುವಾರ ಹಾಗೂ ಒಟ್ಟು ನಾಲ್ಕು ಭಾನುವಾರ ಲಾಕ್ಡೌನ್ ಮಾಡಲು ನಿರ್ಧಾರ ಮಾಡಲಾಗಿತ್ತು. ಇಂದಿನ ಲಾಕ್ಡೌನ್ ಪ್ರಾರಂಭದಲ್ಲಿ ಯಶಸ್ವಿ ಆಗಿದೆ. ಜನರು ಸ್ವಯಂ ಪ್ರೇರಿತರಾಗಿ ಕರ್ಪ್ಯೂಗೆ  ಬೆಂಬಲ ಕೊಟ್ಟು ಸ್ವಯಂ ಲಾಕ್ ಆಗಿದ್ದಾರೆ. ನಗರದಲ್ಲಿ ವಾಹನ ಸಂಚಾರ ವಿರಳವಾಗಿದೆ. ಜನ‌ರೂ ಕೂಡಾ ಅನಗತ್ಯವಾಗಿ ಹೊರಗಡೆ ಬಂದಿಲ್ಲ. ಇನ್ನೂ ಸಂಜೆವರಗೆ ಎಲ್ಲರೂ ಕಟ್ಟುನಿಟ್ಟಿನ ಲಾಕ್ಡೌನ್ ನಿಯಮಾವಳಿ ಪಾಲನೆ‌ ಮಾಡಬೇಕು. ಜನರೇ ಸ್ವಯಂ ನಿಯಂತ್ರಣ ಹಾಕಿಕೊಳ್ಳಿ ಎಂದು ಕರೆ ನೀಡಿದರು.

ಕೊರೋನಾ ವಾರಿಯರ್ ಗಳಾದ ನಮ್ಮ ಪೊಲೀಸರಿಗೆ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಮೂರು ತಿಂಗಳಿಂದ ನಿಮ್ಮನ್ನು ಕಾಯುತ್ತಿರುವ ಕೊರೋನಾ ವಾರಿಯರ್ ಗಳು ಸುರಕ್ಷತೆಯಿಂದ ಇರಬೇಕು ಎಂದರೆ ದಯವಿಟ್ಟು ಜನರು ಸಹಕಾರ ನೀಡಬೇಕು. ಪ್ರತಿ ದಿನ ಐದಾರು ಪೊಲೀಸ್ ಠಾಣೆಗಳನ್ನು ಸೀಲ್ಡೌನ್  ಆಗುತ್ತಿದೆ. ಪೊಲೀಸರ ಹಿತದೃಷ್ಟಿಯಿಂದ ಅವರ ಆರೋಗ್ಯ ತಪಾಸಣೆ, ಟೆಸ್ಟಿಂಗ್ ಟ್ರೀಟ್ ಮೆಂಟ್ ಗೆ ಮತ್ತಷ್ಟು ಆದ್ಯತೆ ನೀಡುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.

SCROLL FOR NEXT