ರಾಜ್ಯ

ಸೋಂಕಿತರ ಚಿಕಿತ್ಸೆಗೆ ಸರ್ಕಾರದ ಮಹತ್ವದ ಹೆಜ್ಜೆ: ಕೋವಿಡ್ ಕೇರ್ ಕೇಂದ್ರಗಳಲ್ಲಿ ಐಸಿಯು ಸ್ಥಾಪನೆ

Shilpa D

ಬೆಂಗಳೂರು: ಕೊರೋನಾ ಸೋಂಕಿತರ ಚಿಕಿತ್ಸೆಗೆ ಮಹತ್ವದ ಹೆಜ್ಜೆಗಳನ್ನು ಇಟ್ಟಿರುವ ರಾಜ್ಯ ಸರ್ಕಾರ ಕೋವಿಡ್ ಕೇರ್ ಕೇಂದ್ರಗಳಲ್ಲಿ ತುರ್ತು ನಿಗಾ ಘಟಕಗಳನ್ನು (ಐಸಿಯು) ಸ್ಥಾಪಿಸಲು ಮುಂದಾಗಿದೆ.

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರಕ್ಕೆ ಭೇಟಿ  ನೀಡಿ, ಅಲ್ಲಿ ಮಾಡಲಾಗಿರುವ ಕೋವಿಡ್ ಬೆಡ್ ಮತ್ತಿತರ ಸೌಲಭ್ಯಗಳನ್ನು ಪರಿಶೀಲಿಸಿದ  ನಂತರ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ ,ಜಿಕೆವಿಕೆ, ಹಜ್ ಭವನ ಮತ್ತು ರವಿಶಂಕರ್ ಗುರೂಜಿ ಆಶ್ರಮದಲ್ಲಿರುವ ಕೋವಿಡ್ ಕೇರ್ ಕೇಂದ್ರಗಳು ಈಗಾಗಲೇ ಆರಂಭವಾಗಿವೆ. ಇನ್ನು ಕೋರಮಂಗಲ ಒಳಾಂಗಣ ಕ್ರೀಡಾಂಗಣ,
ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಕೇರ್ ಸೆಂಟರುಗಳಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ ಎಂಬ ಮಾಹಿತಿಯನ್ನು ಅವರು ನೀಡಿದರು.

ಪ್ರತಿ ಕೋವಿಡ್ ಕೇರ್ ಕೇಂದ್ರದಲ್ಲೂ 10 ಐಸಿಯು ತೆರೆಯಲಾಗುವುದು. ವಸ್ತು ಪ್ರದರ್ಶನ ಕೇಂದ್ರದಲ್ಲಿ 100 ಐಸಿಯು ಬೆಡ್ ಗಳನ್ನು ಮಾಡುತ್ತೇವೆ. ಇಲ್ಲಿ ಆಮ್ಲಜನಕ ವ್ಯವಸ್ಥೆ ಸೇರಿಅತ್ಯಾಧುನಿಕ ಸೌಲಭ್ಯಗಳು ಇರುತ್ತವೆ ಎಂದು ಹೇಳಿದ್ದಾರೆ.

ನಗರದ ಎಲ್ಲೆಡೆ ಸೋಂಕಿತರು ತುಂಬಿದರೆ ಉಳಿದವರನ್ನು ವಸ್ತು ಪ್ರದರ್ಶನ ಕೇಂದ್ರಕ್ಕೆ ಶಿಫ್ಟ್ ಮಾಡುತ್ತೇವೆ. ಈ ಕೇಂದ್ರದಲ್ಲಿ ಸೋಮವಾರದ ಹೊತ್ತಿಗೆ 7,000 ಬೆಡ್ ಗಳು ಸಿದ್ಧವಾಗಲಿವೆ. ಉಳಿದ 3,000 ಬೆಡ್ ಗಳು ಮೂರು-ನಾಲ್ಕು ದಿನಗಳಲ್ಲಿ ಸಿದ್ಧವಾಗಲಿವೆ. ಅಷ್ಟರೊಳಗೆ ಈ ಕೇಂದ್ರವು ಸೋಂಕಿತರಿಗೆ ಲಭ್ಯವಾಗಲಿದೆ. ’ಎ’ ಸಿಂಪ್ಟಮೇಟಿಕ್ ರೋಗಿಗಳನ್ನು ಇಲ್ಲಿಗೆ ಸ್ಥಳಾಂತರಿಸುತ್ತೇವೆ ಎಂದು ಉಪ ಮುಖ್ಯಮಂತ್ರಿಗಳು ವಿವರ ನೀಡಿದರು.

ಇನ್ನು ಮುಂದೆ ವೈದ್ಯರು ಮತ್ತು ನರ್ಸುಗಳಿಗೆ ಕೋವಿಡ್ ಕೇರ್ ಗಳಲ್ಲಿ ವೈದ್ಯಕೀಯೇತರ ಕೆಲಸಗಳು ಇರುವುದಿಲ್ಲ. ಅದಕ್ಕೆ ಪ್ರತ್ಯೇಕ ವ್ಯವಸ್ಥಾಪಕರನ್ನು ನಿಯೋಜಿಸಲಾಗುವುದು. ವೈದ್ಯರು, ನರ್ಸುಗಳು ಸಂಪೂರ್ಣವಾಗಿ ತಮ್ಮ ಗಮನವನ್ನು ಸೋಂಕಿತರ ಚಿಕಿತ್ಸೆ, ಆರೈಕೆ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದರು.

ಯಾವುದೇ ಕಾರಣಕ್ಕೆ ನಿಮಗೆ ಹೆಚ್ಚುವರಿ ಒತ್ತಡ ಹೇರುವುದಿಲ್ಲ. ನೀವು ರೋಗಿಗಳ ಮೇಲೆ ಗಮನ ಕೊಟ್ಟರೆ ಸಾಕು. ಸರಕಾರ ಎಲ್ಲ ರೀತಿಯ ನೆರವು ನಿಮಗೆ ನೀಡಲಿದೆ. ನಿಮ್ಮ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿದರು.

ಇದೇ ವೇಳೆ, ತಮಗೆ ಮತ್ತು ರೋಗಿಗಳಿಗೆ ಪೂರೈಕೆಯಾಗುತ್ತಿರುವ ಆಹಾರದ ಗುಣಮಟ್ಟ ಸರಿ ಇಲ್ಲ ಎಂಬ ವಿಷಯವನ್ನು ವೈದ್ಯರು ಉಪ ಮುಖ್ಯಮಂತ್ರಿ ಗಮನಕ್ಕೆ ತಂದರು. ಮರುಕ್ಷಣವೇ, ಆಹಾರ ಪೂರೈಕೆದಾರರಿಗೆ ಫೋನ್ ಕರೆ ಮಾಡಿದ ಡಿಸಿಎಂ, ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ತಾಕೀತು ಮಾಡಿದರಲ್ಲದೆ, ಮತ್ತೆ ದೂರು ಬಂದರೆ ನಿಮ್ಮ ಗುತ್ತಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.

SCROLL FOR NEXT