ರಾಜ್ಯ

ಹೋಂ ಕ್ವಾರಂಟೈನ್: ಜನರ ತಪಾಸಣೆಗೆ ಬಿಬಿಎಂಪಿಯಿಂದ ಕೇಂದ್ರೀಯ ನಿಯಂತ್ರಣ ಕೊಠಡಿ ರಚನೆ

Manjula VN

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಹೋಂ ಕ್ವಾರಂಟೈನ್ ನಲ್ಲಿರುವ ಜನರ ತಪಾಸಣೆಗಾಗಿ ಇದೀಗ ಬಿಬಿಎಂಪಿ ಅಧಿಕಾರಿಗಳು ಕೇಂದ್ರೀಯ ನಿಯಂತ್ರಣ ಕೊಠಡಿ ರಚಿಸಲು ನಿರ್ಧರಿಸಿದ್ದಾರೆ. 

ಕೇಂದ್ರೀಯ ನಿಯಂತ್ರಣ ಕೊಠಡಿಯಲ್ಲಿನ ಅಧಿಕಾರಿಗಳು ಹೋಂ ಕ್ವಾರಂಟೈನ್ ನಲ್ಲಿರುವ ಜನರ ಆರೋಗ್ಯ ತಪಾಸಣೆ ಹಾಗೂ ಮನೆಗಳಿಂದ ಹೊರಗೆ ಬಾರದಂತೆ ನೋಡಿಕೊಳ್ಳಲಿದ್ದಾರೆ. 

ಈ ನಡುವೆ ಹೋಂ ಕ್ವಾರಂಟೈನ್ ನಲ್ಲಿದ್ದವರಲ್ಲಿ ಕೆಲ ಗೊಂದಲಗಳು ಮೂಡಿದ್ದು, ಇವುಗಳನ್ನು ದೂರಾಗಿಸಲು ಶೀಘ್ರದಲ್ಲಿಯೇ ಮಾರ್ಗಸೂಚಿ ಬಿಡುಗಡೆಗೊಳಿಸಲು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. 

ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಇತರೆ ರಾಜ್ಯಗಳಿಂದ ರಾಜ್ಯಕ್ಕೆ ಬರುವ ಜನರನ್ನು ಗಡಿಯಲ್ಲಿಯೇ ತಪಾಸಣೆ ನಡೆಸುವ ಕಾರ್ಯ ಮಾಡುತ್ತಿದ್ದು, ಲಕ್ಷಣ ಇರುವ ಹಾಗೂ ಲಕ್ಷಣ ಇಲ್ಲದಿರುವ ಜನರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರಿಸುವ ಕಾರ್ಯ ಮಾಡುತ್ತಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಅವರು, ಹೋಂ ಕ್ವಾರಂಟೈನ್ ಕುರಿತು ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸಲು ಕಾಲ್ ಸೆಂಟರ್ ಗಳನ್ನು ಸ್ಥಾಪನೆಗೊಳಿಸಲಾಗುತ್ತದೆ. ಕೇಂದ್ರೀಯ ನಿಯಂತ್ರಣ ಕೊಠಡಿಯಲ್ಲಿ ವೈದ್ಯಕೀಯ ವೃತ್ತಿಪರರು ಇರಲಿದ್ದಾರೆ. ಇವರು ಹೋಂ ಕ್ವಾರಂಟೈನ್ ನಲ್ಲಿರುವ ಜನರಿಗೆ ವೈದ್ಯಕೀಯ ಸೇವೆಯನ್ನೂ ಒದಗಿಸಲಿದ್ದಾರೆ. ಹೋಂ ಕ್ವಾರಂಟೈನ್ ನಲ್ಲಿದ್ದವರಿಗೆ  ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

SCROLL FOR NEXT