ರಾಜ್ಯ

ಖ್ಯಾತ ಕಿರುತೆರೆ ನಟ ಸುಶೀಲ್ ಗೌಡ ಆತ್ಮಹತ್ಯೆಗೆ ಶರಣು!

Srinivasamurthy VN

ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ಸ್ಯಾಂಡಲ್ ವುಡ್ ಕಿರುತೆರೆ ನಟ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ವರದಿಯಾಗಿದೆ. 

ಅಂತಃಪುರ ಧಾರಾವಾಹಿ ಖ್ಯಾತಿಯ ಸುಶೀಲ್ ಕುಮಾರ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿ. ಬೆಂಗಳೂರಿನಲ್ಲಿ ಜಿಮ್ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕಳೆದ ಮೂರು ತಿಂಗಳಿನಿಂದ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಜಿಮ್ ಗೆ ನಿರ್ಬಂಧ ಹೇರಲಾಗಿತ್ತು. ಇದೇ ವಿಷಯದಿಂದ ಅವರು ತೀವ್ರ ನೊಂದಿದ್ದರು ಎನ್ನಲಾಗಿದೆ.

ಮೂರು ತಿಂಗಳ ಹಿಂದೆಯೇ ಅವರು ಮಂಡ್ಯದ ವಿವಿ ನಗರದ ತಮ್ಮ ಮನೆಗೆ ಹೋಗಿದ್ದರು. ಇಂಡುವಾಳು ಗ್ರಾಮದಲ್ಲಿರುವ ತಮ್ಮ ಸ್ನೇಹಿತನ ಮನೆಗೆ ತೆರಳಿದ್ದ ಅವರು ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಸುಶೀಲ್ ಕುಮಾರ್, ‘ಸಲಗ’ ಮತ್ತು ‘ಕಮರೊಟ್ಟು ಚೆಕ್ ಪೋಸ್ಟ್’ ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ‘ಸಲಗ' ದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸಲಗ ಚಿತ್ರದಲ್ಲಿ ಸುಶೀಲ್ ನಟ ದುನಿಯಾ ವಿಜಯ್ ಅವರೊಂದಿಗೆ ಕಾಣಿಸಿಕೊಂಡಿದ್ದರು.

ನಟ ದುನಿಯಾ ವಿಜಿ ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆಗೆ ನೋವು ತೋಡಿಕೊಂಡಿದ್ದಾರೆ.

SCROLL FOR NEXT