ರಾಜ್ಯ

ಕೊರೋನಾ ಎಫೆಕ್ಟ್: ಅರಣ್ಯ ಪ್ರದೇಶ, ಸಫಾರಿಗಳಿಂದ ಪ್ರವಾಸಿಗರನ್ನು ಮತ್ತೆ ದೂರವಿಟ್ಟ ಅಧಿಕಾರಿಗಳು!

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳು ಹಾಗೂ ಸಫಾರಿಗಳಿಂದ ಪ್ರವಾಸಿಗರನ್ನು ದೂರ ಇರಿಸಲು ಹಲವು ಜಿಲ್ಲೆಗಳ ಸ್ಥಳೀಯ ಆಡಳಿತ ಮಂಡಳಿಗಳು ನಿರ್ಧಾರ ಕೈಗೊಂಡಿವೆ. 

ಮೈಸೂರು ಜಿಲ್ಲಾ ಆಯುಕ್ತರು ಹೇಳಿಕೆ ನೀಡಿ, ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ. 

ಹೆಚ್.ಡಿ.ಕೋಟೆಯಲ್ಲಿ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಎರಡು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಈ ಎರಡೂ ಪ್ರದೇಶಗಳಿಗೂ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. 

ಮೈಸೂರು ಉಪ ಆಯುಕ್ತ ಅಭಿರಾಮ್ ಶಂಕರ್ ಮಾತನಾಡಿ, ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಕಠಿಣ ನಿರ್ಣಯವನ್ನು ಕೈಗೊಳ್ಳಲಾಗಿದೆ. ಮುಂದಿನ ಆದೇಶದವರೆಗೂ ಈ ಪ್ರದೇಶಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಮೈಸೂರು ಜಿಲ್ಲೆಯ ಎಲ್ಲಾ ಪ್ರವಾಸಿ ಕೇಂದ್ರಗಳು, ಸಫಾರಿಗಳು ಹಾಗೂ ಕಬಿನಿಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ. 

ವಾರದ ಹಿಂದಷ್ಟೇ ಚಿಕ್ಕಮಗಳೂರು, ಚಾಮರಾಜನಗರ ಹಾಗೂ ಕೂರ್ಗ್ ನ ಸ್ಥಳೀಯ ಆಡಳಿತ ಮಂಡಳಿಗಳು ಸ್ವಯಂಪ್ರೇರಿತ ಲಾಕ್'ಡೌನ್ ಆಚರಿಸಿದ್ದವು. ಇದರ ಪರಿಣಾಮ ಹೋಟೆಲ್ ಗಳು, ರೆಸಾರ್ಟ್, ಭದ್ರದಲ್ಲಿರುವ ಸಫಾರಿಗಳು, ಭಾಗಮಂಡಲ, ಕೆ ಗುಡಿ, ಮತ್ತು ದುಬಾರೆಗಳು ಬಂದ್ ಆಗಿದ್ದವು. ಇದೀಗ ಕೇವಲ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮಾತ್ರ ತೆರಿದಿದ್ದು, ಈ ಪ್ರದೇಶದಲ್ಲಿಯೂ ಹೆಚ್ಚು ಸೋಂಕು ಇರುವ ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳ ಜನರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. 

ಆರೋಗ್ಯ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಸ್ಥಳೀಯ ಆಡಳಿತ ಮಂಡಳಿಯ ನಿರ್ಧಾರದ ಮೇಲೆ ಮತ್ತೆ ಪ್ರವಾಸಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 

SCROLL FOR NEXT