ರಾಜ್ಯ

ತುಮಕೂರು: 4 ವರ್ಷದ ಮಗು ಕೊಂದ ಚಿರತೆ; ಆರೇ ತಿಂಗಳಲ್ಲಿ ಮೂರನೇ ಘಟನೆ

Srinivasamurthy VN

ತುಮಕೂರು: ತುಮಕೂರಿನಲ್ಲಿ ಹುಳಿ ದಾಳಿ ಪ್ರಕರಣ ಮುಂದುವರೆದಿದ್ದು, ಇಂದು ನಾಲ್ಕು ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿರುವ ಘಟನೆ ವರದಿಯಾಗಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಬಳಿಯ ಹಸೀಗೆ ಹೊಬಳಿಯ ರಾಜೇಂದ್ರಪುರ ಎಂಬ ಕುಗ್ರಾಮದಲ್ಲಿ ಇಂದು ಘಟನೆ ನಡೆದಿದೆ, ಮೃತ ಬಾಲಕನನ್ನು ಗ್ರಾಮದ ನಿವಾಸಿ ಮುನಿರಾಜು ಮತ್ತು ದೊಡ್ಡೀರಮ್ಮ ಎಂಬ ದಂಪತಿಯ ಅವರ ಪುತ್ರ ಚಂದು ಎಂದು ಗುರುತಿಸಲಾಗಿದೆ.

ತಾಯಿ ದೊಡ್ಡೀರಮ್ಮ ಬಟ್ಟೆ ಒಗೆಯಲು ತಮ್ಮ ಮಗನನ್ನೂ ಕರೆದು ಕೊಂಡು ಹೋಗಿದ್ದರು. ಈ ವೇಳೆ ಮಗು ಆಟವಾಡುತ್ತಿದ್ದಾಗ ಮಗು ಮೇಲೆ ದಾಳಿ ಮಾಡಿದ ಚಿರತೆ ಮಗುವನ್ನು ಎಳೆದೊಯ್ದಿದೆ. ಈ ವೇಳೆ ಇದನ್ನು ಕಂಡ ದಾರಿ ಹೋಕರು ಚಿರತೆಯನ್ನು ಬೆದರಿಸಿ ಮಗುವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಆದರೆ ಜನರು ಆಗಮಿಸುತ್ತಿದ್ದಂತೆಯೇ ಚಿರತೆ ಮಗುವನ್ನು ಅಲ್ಲಿಂದ ಹೊತ್ತೊಯ್ದಿದೆ. ಈ ವೇಳೆ ಸುದ್ದಿತಿಳಿದ ಆರಣ್ಯ ಸಿಬ್ಬಂದಿ ಕೂಡಲೇ ಶೋಧ ನಡೆಸಿದ್ದು, ಅರಣ್ಯದೊಳಗೆ ಮಗುವಿನ ದೇಹ ಪತ್ತೆಯಾಗಿದೆ ಎಂದು ಆರ್ ಎಫ್ ಒ ಮಂಜುನಾಥ್ ಹೇಳಿದ್ದಾರೆ.

ಮೂಲಗಳ ಪ್ರಕಾರ ಮೃತ ಬಾಲಕ ಚಂದು ಮುನಿರಾಜು ಮತ್ತು ದೊಡ್ಡೀಮ್ಮ ಅವರ ಏಕೈಕ ಪುತ್ರ ಎಂದು ತಿಳಿದುಬಂದಿದೆ.  ತೀರಾ ಕುಡುಬಡತನದ ಕುಟುಂಬವಾಗಿದ್ದು, ದಂಪತಿಗೆ ಬ್ಯಾಂಕ್ ಖಾತೆ ಕೂಡ ಇಲ್ಲ ಎನ್ನಲಾಗಿದೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಗಿರೀಶ್ ಅವರು ಹೇಳಿದ್ದಾರೆ. ಅಂತೆಯೇ ಪರಿಹಾರವಾಗಿ 7.5 ಲಕ್ಷ ರೂಗಳನ್ನು ಇಲಾಖೆ ವತಿಯಿಂದ ನೀಡಲಾಗುತ್ತಿದ್ದು, ಮಂಗಳವಾರ ಅವರಿಗೆ ಬ್ಯಾಂಕ್ ಖಾತೆ ತೆರೆದು ಚೆಕ್ ಮೂಲಕ ನೀಡಲಾಗುತ್ತದೆ ಎಂದು ಹೇಳಿದರು.

ಇನ್ನು ತುಮಕೂರಿನಲ್ಲಿ ಚಿರತೆ ದಾಳಿ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಕಳೆದ ಆರು ತಿಂಗಳ ಅವಧಿಯಲ್ಲಿ ಇದು ಮೂರನೇ ಘಟನೆಯಾಗಿದೆ.

SCROLL FOR NEXT