ಬೆಂಗಳೂರು: ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ಮಂತ್ರಿ ಎಸ್ಟಾನ್ ಅಪಾರ್ಟ್'ಮೆಂಟ್ ಹಿಂಭಾಗದ ರಾಜಕಾಲುವೆಗೆ ಬಿದ್ದು ಕೊಚ್ಚಿಹೋಗಿದ್ದ ಅಸ್ಸಾಂ ಮೂಲದ ಮೊನಾಲಿಕಾ (6) ಶನಿವಾರವೂ ಪತ್ತೆಯಾಗಿಲ್ಲ.
ಶುಕ್ರವಾರ ಬೆಳಿಗ್ಗೆ 11.30ರ ಸುಮಾರಿಗೆ ರಾಜಕಾಲುವೆ ಸಮೀಪ ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದು ಬಾಲಕಿ ಕೊಚ್ಚಿ ಹೋಗಿದ್ದಳು.
ಕತ್ತಲಾದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಶನಿವಾರ ಬೆಳಿಗ್ಗೆ 7.30ರಿಂದ ರಾತ್ರಿ 8 ಗಂಟೆಯವರೆಗೂ ಬಾಲಕಿಗಾಗಿ ಹುಡುಕಾಡಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ಕಾರ್ಯಾಚರಣೆ ಮುಂದುವರೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ರಾಜಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಸಾಕಷ್ಟು ಹೂಳು ತುಂಬಿದ್ದು, ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ಜೆಸಿಬಿ ಹಾಗೂ ಬೋಟ್'ಗಳ ಸಹಾಯದಿಂದ ಪತ್ತೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಬಾಲಕಿ ಪತ್ತೆಯಾದರೂ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಬಾಲಕಿ ಪೋಷಕರ ವಿರುದ್ಧ ಪ್ರಕರಣ ದಾಖಲು
ಈ ನಡುವೆ ಬಿಬಿಎಂಪಿ ಅಧಿಕಾರಿಗಳು ಬಾಲಕಿಯ ಪೋಷಕರ ವಿರುದ್ಧ ನಿರ್ಲಕ್ಷ್ಯದ ಅಡಿಯಲ್ಲಿ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ತಿಳಿದುಬಂದಿದೆ.
ಬಾಲಕಿಯ ತಂದೆ ರವಿಕುಮಾರ್ ಅವರು ಕೊಳಗೇರಿ ನಿವಾಸಿಯಾಗಿದ್ದು, ಹಲವು ವರ್ಷಗಳಿಂದಲೂ ಈ ಪ್ರದೇಶದಲ್ಲಿ ನೆಲೆಯೂರಿದ್ದಾರೆಂದು ಹೇಳಲಾಗುತ್ತಿದೆ. ಇನ್ನು ಪ್ರಕರಣ ಸಂಬಂಧ ಈ ವರೆಗೂ ಯಾವುದೇ ಎಫ್ಐಆರ್ ಗಳೂ ದಾಖಲಾಗಿಲ್ಲ.