ರಾಜ್ಯ

ಕರ್ತವ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಬಿಬಿಎಂಪಿ, ಆರೋಗ್ಯಾಧಿಕಾರಿಗಳಿಗೆ ಸಿಎಂ ಎಚ್ಚರಿಕೆ

Manjula VN

ಬೆಂಗಳೂರು: ಕೊರೋನಾ ನಿರ್ವಹಣೆಯಲ್ಲಿ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಚ್ಚರಿಕೆ ನೀಡಿದ್ದಾರೆ. 

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸೋಮವಾರ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಬೆ ನಡೆಯಿತು. 

ಈ ವೇಳೆ ಮಹಾಮಾರಿ ಕೋವಿಡ್ ನಿಯಂತ್ರಣ ಸಂಬಂಧ ವ್ಯವಸ್ಥೆ ಮಾಡಲಾಗಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಹಾಸಿಗೆಗಳು, ಉಪಕರಣಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಬಾಡಿಗೆ ಅಧಾರದ ಮೇಲೆ ಪಡೆದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ಗಮನಕ್ಕೆ ತಾರದೆ ಇಂತಹ ದೊಡ್ಡ ತೀರ್ಮಾನ ಕೈಗೊಂಡಿರುವುದಕ್ಕೆ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ಅಲ್ಲದೇ, ಈ ತೀರ್ಮಾನವನ್ನು ಕೈಗೊಂಡವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ. 

ನಗರದ ತುಮಕೂರು ರಸ್ತೆಯ ಬಿಐಇಸಿಯಲ್ಲಿ ಅಳವಡಿಸಲಾಗಿರುವ ಸಾವಿರಾರು ಹಾಸಿಗೆಗಳನ್ನು ಖರೀದಿಸದೆ ಯಾಕೆ ಬಾಡಿಗೆ ಪಡೆದುಕೊಳ್ಳಲಾಗಿದೆ. ಎರಡು ತಿಂಗಳ ಕಾಲ ಹಾಸಿಗೆಗಳ ಬಾಡಿಗೆ ಮೊತ್ತ ಎಷ್ಟಾಗುತ್ತದೆ? ಪ್ರತಿಪಕ್ಷಗಳು ಈಗಾಗಲೇ ಆರೋಗ್ಯ ಇಲಾಖೆಯಲ್ಲಿ ಅಕ್ರಮ ನಡೆದಿದೆ. ಉಪಕರಣ, ಔಷಧಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಎಂಬುದಾಗಿ ಆರೋಪಿಸಿ ಹೋರಾಟ ಆರಂಭಿಸಿವೆ.ಇಂತಹ ಸಮಯದಲ್ಲಿ ಇಂತಹ ತೀರ್ಮಾನ ಕೈಗೊಂಡಿರುವುದು ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಲು ಅಸ್ತ್ರ ಸಿಕ್ಕಂತಾಗುವುದಿಲ್ಲವೇ? 

ಯಾವ ಕಾರಣ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ? ಹಾಸಿಗೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ತೀರ್ಮಾನದಿಂದ ಜನರಲ್ಲಿ ತಪ್ಪು ಭಾವನೆ ಮೂಡಿಸಲು ದಾರಿ ಮಾಡಿಕೊಡಲಿದೆ ಎಂದು ತರಾಟೆಗೆ ತೆಗೆದುಕೊಂಡರು. ಕೊರೋನಾ ಸೋಂಕಿತರನ್ನು ಶೀಘ್ರವಾಗಿ ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಸಹಕಾರಿಯಾಗಲು ಆ್ಯಂಬುಲೆನ್ಸ್ ಗಳನ್ನು ಖೀರಿದಿಸುವಂತೆ ಸೂಚನೆ ನೀಡಿ 15 ದಿನಗಳು ಕಳೆದಿವೆ. 

ಆದರೆ, ಈ ವರೆಗೂ ಆ್ಯಂಬುಲೆನ್ಸ್ ಖರೀದಿ ಮಾಡಿಲ್ಲ. ಯಾವ ಕಾರಣಕ್ಕಾಗಿ ಖರೀದಿ ಮಾಡಿಲ್ಲ ಎಂದು ವಿವರಿಸಿ. ಖಾಸಗಿ ಆಸ್ಪತ್ರೆಗಳು ಹಾಸಿಕೆಗಳನ್ನು ಸರ್ಕಾರಕ್ಕೆ ಯಾವ ಕಾರಣಕ್ಕಾಗಿ ನೀಡುತ್ತಿಲ್ಲ. ಕೂಡಲೇ ಇವೆಲ್ಲವನ್ನೂ 1-2 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಆದೇಶವನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂದರೆ ಹೇಗೆ ಎಂದು ಕಿಡಿಕಾರಿದರು ಎಂದು ತಿಳಿದುಬಂದಿದೆ. 

SCROLL FOR NEXT