ರಾಜ್ಯ

ಬೆಂಗಳೂರು: ಮದುವೆಗೆ ಒಪ್ಪದ ಅಪ್ರಾಪ್ತೆಯನ್ನು ಇರಿದು ಕೊಂದ ದುಷ್ಕರ್ಮಿ!

Manjula VN

ಬೆಂಗಳೂರು: ಮದುವೆಗೆ ನಿರಾಕರಿಸಿದ್ದಕ್ಕೆ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ. 

ರಾಜಾಜಿನಗರದ ಪ್ರಕಾಶ್ ನಗರದ ನಿವಾಸಿ ಮುನಿರಾಜು ಅಲಿಯಾಸ್ ಆದಿಗೌಡ ಎಂಬಾತನೇ ಈ ಕೃತ್ಯ ಎಸಗಿದ ದುಷ್ಕರ್ಮಿಯಾಗಿದ್ದಾನೆ. 

ಘಟನೆ ಬಗ್ಗೆ ತಿಳಿದು ಸ್ಥಕ್ಕೆ ತೆರಳಿದ ಗಿರಿನಗರ ಠಾಣೆ ಪೊಲೀಸರು, ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. 

ಪ್ರಕಾಶ ನಗರದ ಮುನಿರಾಜ ಅಪರಾಧ ಹಿನ್ಮನೆಲೆಯುಳ್ಳವನಾಗಿದ್ದು, ಆತನ ಮೇಲೆ ಕೊಲೆ ಯತ್ನ ಸೇರಿದಂತೆ 6ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಕ್ರಿಮಿನಲ್ ಚಟುವಟಿಕೆ ಹಿನ್ನೆಲೆಯಲ್ಲಿ ಮುನಿರಾಜು ಮೇಲೆ ರಾಜಾಜಿನಗರದ ಪೊಲೀಸರು ರೌಡಿಪಟ್ಟಿ ತೆರೆದಿದ್ದರು. ಪ್ರಕಾಶ ನಗರದಲ್ಲೇ ಮೃತಳ ಪೋಷಕರು ನೆಲೆಸಿದ್ದರು. ಹೀಗಾಗಿ ಒಂದೇ ಏರಿಯಾದಲ್ಲಿ ವಾಸವಾಗಿದ್ದರಿಂದ ಆಕೆಗೆ ಮುನಿರಾಜು ಪರಿಚಯವಿತ್ತು. 

ಹೀಗೆ 3 ವರ್ಷಗಳಿಂದ ಪರಸ್ಪರ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಇತ್ತೀಚೆಗೆ ಮುನಿರಾಜು ನಡವಳಿಕೆಯಿಂದ ಬೇಸಕ್ಕ ಬಾಲಕಿ ಪ್ರಿಯಕರನಿಂದ ಪ್ರತ್ಯೇಕವಾಗಲು ಮುಂದಾಗಿದ್ದಳು. ಇದರಿಂದ ಕೆರಳಿದ ಆತ, ಪ್ರಿಯತಮೆ ಮನವೊಲೈಕೆಗೆ ಯತ್ನಿಸಿದ್ದ. ಇನ್ನು ಪ್ರಿಯತಮೆ ಜೊತೆ ವಿವಾಹವಾಗಲು ಯೋಜಿಸಿದ್ದ ಆರೋಪಿ, 

ಇದಕ್ಕಾಗಿ 2 ವಾರಸಗಳ ಹಿಂದಷ್ಟೇ ಹೊಸಕೆರೆಹಳ್ಳಿಯ ದ್ವಾರಕ ನಗರದಲ್ಲಿ ಮನೆ ಬಾಡಿಗೆ ಪಡೆದಿದ್ದ. ಮಾತನಾಡುವ ನೆಪದಲ್ಲಿ ಸೋಮವಾರ ರಾತ್ರಿ 7ರ ಸುಮಾರಿಗೆ ಪ್ರಿಯತಮೆಯನ್ನು ಮನೆಯಿಂದ ಹೊರಗೆ ಕರೆಸಿಕೊಂಡ ಮುನಿರಾಜು, ಆಕೆಯನ್ನು ಬಲವಂತವಾಗಿ ದ್ವಾರಕ ನಗರಕ್ಕೆ ಕರೆತಂದಿದ್ದ. ಅಷ್ಟರಲ್ಲಿ ಆ ಮನೆಯಲ್ಲಿ ಅರಿಷಿನ ದ್ವಾರ ಸೇರಿದಂತೆ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಮದುವೆಗೆ ಬಾಲಕಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ, ಚಾಕುವಿನಿಂದ ನಾಲ್ಕು ಬಾರಿ ಇರಿದು ಆಕೆಯನ್ನು ಕೊಂದಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಮಗಳು ನಾಪತ್ತೆಯಿಂದ ದಿಗಿಲುಗೊಂಡ ಆಕೆಯ ಪೋಷಕರು ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

SCROLL FOR NEXT