ಮಂಡ್ಯ: ಮಂಡ್ಯದ ಜಲಭಗೀರಥ ಕಾಮೇಗೌಡರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ಕಾಮೇಗೌಡರು ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಹೊಂದುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಬಲಗಾಲು ಗಾಯವಾಗಿ ನೋವಿನಿಂದ ಮಳವಳ್ಳಿಯ ತಾಲೂಕು ಆಸ್ಪತ್ರೆ, ಮಂಡ್ಯ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದ ಕಾಮೇಗೌಡರಿಗೆ ಇತ್ತೀಚಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆಗ ಅವರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಲಪಡಿಸಲಾಗಿದ್ದು ಇದೀಗ ಕಾಮೇಗೌಡರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ.
85 ವರ್ಷದ ಕಾಮೇಗೌಡರನ್ನು ಇದೀಗ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟದಲ್ಲಿ ಕಳೆದ ನಾಲ್ಕು ದಶಕಗಳಿಂದ ಕೆರೆ, ಕಾಲುವೆಗಳನ್ನು ನಿರ್ಮಿಸಿ ಸುತ್ತಲಿನ ಗ್ರಾಮಸ್ಥರಿಗೆ, ದನ ಕರುಗಳಿಗೆ ನೀರಿನ ಆಸರೆ ಒದಗಿಸಿದ್ದ ಕಾಮೇಗೌಡರ ಸಾಧನೆಯನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಮರಿಸಿದ್ದರು.