ರಾಜ್ಯ

ಮುಖ್ಯಮಂತ್ರಿಗಳಿಂದ 'ಶಿವಪದ ರತ್ನಕೋಶ' ಗ್ರಂಥ ಲೋಕಾರ್ಪಣೆ

Srinivas Rao BV

ಬೆಂಗಳೂರು: ಮೈಸೂರಿನ ಜಗದ್ಗುರು ಶಿವರಾತ್ರೀಶ್ವರ ಮಹಾವಿದ್ಯಾಪೀಠ ಹೊರತಂದಿರುವ “ಶಿವಪದ ರತ್ನಕೋಶ” ಗ್ರಂಥವನ್ನು ಮುಖ್ಯಮಂತ್ರಿ ಬಿ ಎಸ್.ಯಡಿಯೂರಪ್ಪ ಅವರು ಇಂದು ಆನ್ ಲೈನ್ ಮೂಲಕ ಬಿಡುಗಡೆ ಮಾಡಿದರು. 

ನಂತರ ಮಾತನಾಡಿದ ಅವರು, ಶಿವಪದ ರತ್ನಕೋಶವು ಶೈವಾಗಮಗಳು, ವಚನ ಸಾಹಿತ್ಯ, ವೀರಶೈವ ಕಾವ್ಯ, ಅಪರೂಪದ ರೂಢಿಯ ಪದಗಳನ್ನು ಒಳಗೊಂಡು ರೂಪುಗೊಂಡಿದೆ ಎಂದರು.

ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಗೌರವ ಸಂಪಾದಕತ್ವದಲ್ಲಿ ಹಾಗೂ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮೂಡಿಬಂದಿರುವ ಈ ಗ್ರಂಥವು ಶಿವಧರ್ಮ, ಸಂಸ್ಕೃತಿ, ಸಿದ್ಧಾಂತಗಳನ್ನು ಯಥಾವತ್ತಾಗಿ ಪರಿಚಯಿಸುವ ಸಾವಿರ ಪುಟಗಳ ಬೃಹತ್ ಪದ ಭಂಡಾರವಾಗಿದೆ. 

ಜಗದ್ಗುರು ಶಿವರಾತ್ರೀಶ್ವರ ಗ್ರಂಥಮಾಲೆಯೂ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಪ್ರಕಟಿಸಿರುವ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ ಎಂದು ಹೇಳಿದರು. ಕರ್ನಾಟಕದ ಜನರ ಬದುಕಿನಲ್ಲಿ ಮಠಪೀಠಗಳ ಪಾತ್ರ, ಪ್ರಭಾವ ಅಗಾಧವಾದುದು. 

ವಿದ್ವತ್ಪೂರ್ಣವೂ, ಪರಿಶ್ರಮದಾಯಕವೂ ಆದ ಈ ಮಹತ್ಕಾರ್ಯವನ್ನು ನೆರವೇರಿಸಿದ ಸುತ್ತೂರು ಶ್ರೀಮಠಕ್ಕೆ ಹಾಗೂ ಸಂಪಾದಕ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಅಮೂಲ್ಯ ಸಂಪತ್ತಿನ ಸದುಪಯೋಗವನ್ನು ಕನ್ನಡಿಗರು ಪಡೆಯಲಿ ಎಂದು ಮುಖ್ಯಮಂತ್ರಿ ಹೇಳಿದರು.

ಸಭೆಯಲ್ಲಿ ಸುತ್ತೂರು ಮಠದ ಜೆ.ಎಸ್.ಎಸ್ ಮಹಾವಿದ್ಯಾಪೀಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು, ತುಮಕೂರಿನ ಸಿದ್ದಗಂಗಾ ಮಠದ ಸಿದ್ಧಲಿಂಗಾಸ್ವಾಮಿಗಳು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ,ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ ಗೌಡ ಪಾಟೀಲ್ ಉಪಸ್ಥಿತರಿದ್ದರು.

SCROLL FOR NEXT