ರಾಜ್ಯ

ಕೊರೋನಾ: ರಾಜ್ಯದಲ್ಲಿ ಒಂದೇ ದಿನ 4 ಮಂದಿ ಸಾವು

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರಣಕೇಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇದೇ ಮೊದಲ ಬಾರಿಗೆ ಒಂದೇ ದಿನ ನಾಲ್ವರು ಸೋಂಕಿತರು ಸಾವಿಗೀಡಾಗಿದ ವರದಿಯಾಗಿದೆ. 

ಗದಗದಲ್ಲಿ 44 ವರ್ಷದ 4082 ಸೋಂಕಿತ ವ್ಯಕ್ತಿ ಐಎಲ್ಐ, ಮಧಮೇಹ ಹಿನ್ನೆಲೆಯಲ್ಲಿ ಜೂನ್ 2ರಂದು ಆಸ್ಪತ್ರೆಗೆ ದಾಖಲಿಸಿದ್ದು, ಅಂದೇ ಮೃತಪಟ್ಟಿದ್ದಾರೆ. 

ದಾವಣಗೆರೆಯಲ್ಲಿ 83 ವರ್ಷದ ಮಹಿಳೆ ಎದೆನೋವಿನಿಂದ ಮೇ.31ರಂದು ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. 

ಬೆಂಗಳೂರು ನಗರದಲ್ಲಿ 65 ವರ್ಷದ ಮಹಿಳೆ ಹಾಗೂ 60 ವರ್ಷದ ಮಹಿಳೆ ತೀವ್ರ ಉಸಿರಾಟ ಸಮಸ್ಯೆ, ಜ್ವರ ಕೆಮ್ಮನಿಂದ ಜೂ.3ರಂದು ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಮೇ.31ರಿಂದ ಜೂ.3ರವರೆಗೆ ಮೃತಪಟ್ಟಿರುವ ನಾಲ್ಕು ಮಂದಿಗೆ ಸೋಂಕು ಇದ್ದದ್ದು ಗುರುವಾರ ದೃಢಪಟ್ಟಿದೆ. 

ಇನ್ನು ಗುರುವಾರ ಒಂದೇ ರಾಜ್ಯದಲ್ಲಿ 257 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರಲ್ಲಿ 155 ಮಂದಿ ಅಂತರ್ ರಾಜ್ಯ ಹಾಗೂ ಒಬ್ಬರು ವಿದೇಸಿ ಪ್ರಯಾಣಿಕರಾಗಿದ್ದಾರೆ. ಉಳಿದಂತೆ 105 ಮಂದಿಗೆ ಸ್ಥಳೀಯವಾಗಿ ಸೋಂಕು ಹರಡಿದೆ. 155 ಮಂದಿ ಅಂತರ್ ರಾಜ್ಯ ಪ್ರಯಾಣಿಕರ ಪೈಕಿ 147 ಮಂದಿ ಮಹಾರಾಷ್ಟ್ರದಿಂದ ವಾಪಸಾದವರೇ ಆಗಿದ್ದಾರೆ. 

ಉಡುಪಿಯಲ್ಲಿ 92 ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 564ಕ್ಕೆ ಏರಿಕೆಯಾಗಿದೆ. ರಾಯಚೂರಲ್ಲಿ 88 ಪ್ರಕರಣ ವರದಿಯಾಗಿದ್ದು, ಈಗ ಸೋಂಕಿತರ ಸಂಖ್ಯೆ 356ಕ್ಕೆ ತಲುಪಿದೆ. ಉಳಿದಂತೆ ಮಂಡ್ಯ, ಹಾಸನ ತಲಾ 15, ದಾವಣಗೆರೆ 13, ಬೆಳಗಾವಿ 12, ಬೆಂಗಳೂರು ನಗರ 9, ದಕ್ಷಿಣ ಕನ್ನಡ 4, ಚಿಕ್ಕಬಳ್ಳಾಪುರ, ಗದಗದಲ್ಲಿ ತಲಾ ಎರಡು, ಬಳ್ಳಾರಿ, ತುಮಕೂರು, ಹಾವೇರಿ, ಮೈಸೂರು, ವಿಜಯಪುರದಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ. ಗುರುವಾರ 4 ಸೋಂಕಿತರ ಸಾವು ಸಂಭವಿಸಿದ್ದು, ಬೆಂಗಳೂರು 2, ಗದಗ ಹಾಗೂ ದಾವಣಗೆಹರೆಯಲ್ಲಿ ತಲಾ 1 ಸೋಂಕಿತರ ಸಾವು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ.

SCROLL FOR NEXT