ರಾಜ್ಯ

ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ 'ಮಕ್ಕಳಿಗೆ ಬೇಕು ಹಣಕ್ಲಾಸು' ಪುಸ್ತಕ ಬಿಡುಗಡೆ 

Srinivas Rao BV

ಕನ್ನಡಪ್ರಭ.ಕಾಮ್ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ಮಕ್ಕಳಿಗೆ ಬೇಕು ಹಣಕ್ಲಾಸು ಪುಸ್ತಕ ಬಿಡುಗಡೆಯಾಗಿದೆ. 

ಸಮನ್ವಿತ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದ್ದು, ರಂಗಸ್ವಾಮಿ ಮೂಕನಹಳ್ಳಿ ಅವರ 9 ನೇ ಪುಸ್ತಕ ಇದಾಗಿದೆ. 

ಮಕ್ಕಳಿಗೆ ಬಾಲ್ಯದಿಂದಲೇ ಹಣಕಾಸಿನ ಬಗ್ಗೆ ತಿಳುವಳಿಕೆ ನೀಡುವುದಕ್ಕೆ ಸಹಕಾರಿಯಾಗುವ ಉದ್ದೇಶದಿಂದ ಈ ಪುಸ್ತಕ ಹೊರತರಲಾಗಿದೆ. "ನಾವು ಪಟ್ಟ ಕಷ್ಟ ಮಕ್ಕಳು ಪಡಬಾರದು, ಅಯ್ಯೋ ಇದ್ದದ್ದೇ ಮುಂದೊಂದು ದಿನ ದೊಡ್ಡವರಾದ ಮೇಲೆ ಈ ಜಂಜಾಟಗಳು, ಎಂಬ ಮನಸ್ಥಿತಿಯಿಂದಾಗಿ ಈ ಪೀಳಿಗೆಯ ಪೋಷಕರು  ಮಕ್ಕಳಿಗೆ ಬಾಲ್ಯದಲ್ಲಿ ಆರ್ಥಿಕ ವಿಷಯಗಳ ಬಗ್ಗೆ ತಿಳುವಳಿಕೆ ನೀಡಲು ಹಿಂಜರಿಯುತ್ತಾರೆ. ಆದರೆ ಮಕ್ಕಳಿಗೆ ಮೂರು ವರ್ಷವಿದ್ದಾಗಲೇ, ತಂದೆ ಖರ್ಚು ಮಾಡುವ ಹಣದ ಬಗ್ಗೆ ಕುತೂಹಲವಿರುತ್ತದೆ. ಪೋಷಕರು ಮಕ್ಕಳಿಗೇನು ತಿಳಿಯುತ್ತದೆ ಹಣಕಾಸಿನ ವಿಚಾರ ಎಂದುಕೊಳ್ಳುತ್ತಾರೆ. ಆದರೆ ಮಕ್ಕಳಿಗೆ 3ನೇ ವಯಸ್ಸಿನಿಂದಲೇ ಒಂದಷ್ಟು ಹಣಕಾಸಿನ ಬಗ್ಗೆ ತಿಳುವಳಿಕೆ ನೀಡಲು ಪ್ರಾರಂಭಿಸಬಹುದಾಗಿದೆ ಎಂದು ಲೇಖಕ ರಂಗಸ್ವಾಮಿ ಮೂಕನಹಳ್ಳಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ವಿಜ್ಞಾನಿ, ಜನಪ್ರಿಯ ವಿಜ್ಞಾನ ಲೇಖಕ ಸುಧೀಂದ್ರ ಹಾಲ್ದೊಡ್ಡೇರಿ, "ನನ್ನ ತಂದೆಯವರನ್ನು ಪತ್ರಕರ್ತರಷ್ಟೇ ಅಲ್ಲ, ಲೆಕ್ಕಪತ್ರಕರ್ತರೂ ಹೌದು ಎಂದು ಅವರ ಸಹೋದ್ಯೋಗಿಗಳು ಹೇಳುತ್ತಿದ್ದರು. ಈ ಆರ್ಥಿಕ ಶಿಸ್ತಿನಿಂದಲೇ ಅವರು ನಮ್ಮದಿ ಕಂಡರು ಅವರಿಗಿಂತ ಹೆಚ್ಚು ನೆಮ್ಮದಿಯನ್ನು ಕಂಡೆವು". 

ನಮಗೆರುವ ವಿಷಯ ಪರಿಜ್ಞಾನದಿಂದ ಎಲ್ಲವನ್ನೂ ನಿಭಾಯಿಸಬಹುದು ಎಂದುಕೊಳ್ಳುತ್ತೇವೆ. ಆದರೆ ನಿಭಾಯಿಸುವುದಕ್ಕೆ ಹಣಕಾಸು ಮುಖ್ಯವಾಗಿರುತ್ತದೆ. ಮಕ್ಕಳಿಗೆ ಅಪ್ಪ-ಅಮ್ಮ ಎಂದರೆ ಕೇಳಿದಾಗಲೆಲ್ಲಾ ದುಡ್ಡು ಕೊಡುವ ಎಂಟಿಎಂ ಎಂಬ ಕಲ್ಪನೆ ನೀಡಬಾರದು, ಮಕ್ಕಳಿಗೆ ದುಡ್ಡಿನ ಮಹತ್ವ, ಹಣವನ್ನು ವಿವೇಚನೆಯಿಂದ ಬಳಸುವುದನ್ನು ಕಲಿಸಿಕೊಡಬೇಕು. ಈ ನಿಟ್ಟಿನಲ್ಲಿ ರಂಗಸ್ವಾಮಿ ಮೂಕನಹಳ್ಳಿಯವರು ಸರಳ ಕನ್ನಡದಲ್ಲಿ ಬರೆದಿರುವುದು ಸಂತಸವಾಗಿದೆ ಎಂದು ಹೇಳಿದ್ದಾರೆ. 

SCROLL FOR NEXT