ರಾಜ್ಯ

ಕೊರೋನಾ ಎಫೆಕ್ಟ್: 'ರೈತರು ಬೇಕಾಗಿದ್ದಾರೆ'; ಕೃಷಿ ಕ್ಷೇತ್ರದತ್ತ ಹೊರಳುತ್ತಿದೆ ಜನರ ಆಸಕ್ತಿ!

Sumana Upadhyaya

ಮೈಸೂರು: ಪ್ರತಿ ಸಮಸ್ಯೆಯೊಳಗೆ ಒಂದು ಅವಕಾಶವಿರುತ್ತದೆ ಎನ್ನುತ್ತಾರೆ. ಕೋವಿಡ್-19 ಲಾಕ್ ಡೌನ್ ಹಲವರಿಗೆ ಹಲವು ರೀತಿಯಲ್ಲಿ ಕಷ್ಟಗಳನ್ನು ತಂದೊಡ್ಡಿರಬಹುದು. ಆದರೆ ಇದು ಕೆಲವರ ಬಾಳಲ್ಲಿ ಹೊಸ ಅವಕಾಶಕ್ಕೆ, ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಇದು ಸಾಕಷ್ಟು ಅವಕಾಶಗಳನ್ನು ಹೊಸದಾಗಿ ಸೃಷ್ಟಿಮಾಡುತ್ತಿದೆ.

ನಗರ ಬಿಟ್ಟು ಹಳ್ಳಿ ಬದುಕು, ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ಹಲವರಲ್ಲಿ ಕೇಳಿಬರುತ್ತಿದೆ.
ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಮತ್ತು ಫೋಟೋಗಳಲ್ಲಿ ರೈತರು ಬೇಕಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಆಸಕ್ತ ರೈತರು ಇದಕ್ಕೆ ಸೇರಬಹುದು. ಅವರಿಗೆ ತಿಂಗಳಿಗೆ ಊಟ, ವಸತಿ ವ್ಯವಸ್ಥೆ ಜೊತೆಗೆ 10ರಿಂದ 30 ಸಾವಿರ ರೂಪಾಯಿಗಳವರೆಗೆ ವೇತನ ನೀಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಕೃಷಿ ವಲಯದಲ್ಲಿ ಉದ್ಯೋಗ ಮತ್ತು ತಂತ್ರಜ್ಞಾನಗಳಿಗೆ ದಾರಿ ಮಾಡಿಕೊಡುತ್ತಿದೆ.

ಮಂಡ್ಯ ಮೂಲದ ಗ್ರಾಸ್ ರೂಟ್ಸ್ ಆರ್ಗನಿಕ್ ನ ನಿರ್ದೇಶಕ ದೀಪಕ್ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಹಾಕಿದ್ದು ವೈರಲ್ ಆಗಿದೆ. ಸಾವಯವ ಕೃಷಿಯಲ್ಲಿ ವಿಶೇಷ ಪರಿಣತಿ ಹೊಂದಿರುವವರಿಂದ ನಾವು ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಬಹು ರಾಷ್ಟ್ರೀಯ ಅಂತಾರಾಷ್ಟ್ರೀಯ ಕಂಪೆನಿಗಳು ಮತ್ತು ಸಾಫ್ಟ್ ವೇರ್ ಕಂಪೆನಿಗಳಂತೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವವರಿಗೆ ನಾವು ತರಬೇತಿ ಕೊಟ್ಟು ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ. ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದವರು ಕೆಲಸ ಕಳೆದುಕೊಂಡು ಇದೀಗ ನಮ್ಮ ಬಳಿ ಬರಲು ಕೇಳುತ್ತಿದ್ದಾರೆ ಎಂದರು.

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ. ಕೋವಿಡ್ -19 ಕಾರಣದಿಂದಾಗಿ ಪ್ರಸ್ತುತ ಆರ್ಥಿಕ ಕುಸಿತ ಮತ್ತು ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕೃಷಿಯ ಮೂಲಕ ನಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ರೈತ ಮುಖಂಡರೊಬ್ಬರು ಹೇಳುತ್ತಾರೆ.

SCROLL FOR NEXT