ಮಂಡ್ಯ: ನಾಗಮಂಗಲ ತಾಲ್ಲೂಕಿಗೆ ಕರಾಳ ಭಾನುವಾರವಾಗಿದ್ದು, ಪ್ರತ್ಯೇಕ ಘಟನೆಯಲ್ಲಿ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು, ಓರ್ವ ಯುವತಿ ಹಾಗೂ ಬಾಲಕಿ ಸೇರಿದಂತೆ ಐವರು ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಹಾಗೂ ಬೆಳ್ಳೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಬೀರನಹಳ್ಳಿಯಲ್ಲಿ ಮೂವರು ನೀರು ಪಾಲು
ನಾಗಮಂಗಲ ತಾಲ್ಲೂಕು ಬೋಗಾಧಿ ಗ್ರಾ.ಪಂ. ವ್ಯಾಪ್ತಿಯ ಬೀರನಹಳ್ಳಿ ಗ್ರಾಮದ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗ್ಗೆ ೧೦ ಗಂಟೆಯ ಸಮಯದಲ್ಲಿ ಜರುಗಿದೆ.
ಬೀರನಹಳ್ಳಿ ಗ್ರಾಮದ ನರಸಿಂಹಯ್ಯ ಎಂಬುವರ ಪತ್ನಿ ಗೀತಾ (೪೦) ಹಾಗೂ ಇವರ ಪುತ್ರಿಯರಾದ ಸವಿತಾ (೧೯), ಸೌಮ್ಯ (೧೪) ಎಂಬುವರು ನೀರು ಪಾಲಾದ ದುರ್ದೈವಿಗಾಗಿದ್ದಾರೆ.
ಇಂದು ಬೆಳಿಗ್ಗೆ ಸುಮಾರು ೧೧.೩೦ ರ ಸುಮಾರಿಗೆ ಕೆರೆಯಲ್ಲಿ ಬಿಂದಿಗೆ ತೇಲುತ್ತಿರುವುದನ್ನು ಹಾಗೂ ಕೆರೆ ದಡದಲ್ಲಿ ಬಟ್ಟೆಗಳು ಬಿದ್ದಿರುವುದನ್ನು ಗಮನಿಸಿದ ದಾರಿಹೋಕರು ಶಂಕೆಗೊಂಡು ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೃತ ದೇಹಗಳು ದೊರೆತಿವೆ.
ಮೊದಲು ಒಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಹೋದ ಇನ್ನಿಬ್ಬರು ಸಹ ಕೆರೆಗೆ ಬಿದ್ದು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಂಡಿದ್ದಾರೆ.
ಚೋಳಸಂದ್ರದಲ್ಲಿ ಇಬ್ಬರು ಕೆರೆ ಪಾಲು
ನಾಗಮಂಗಲ ತಾಲ್ಲೂಕು ಬೆಳ್ಳೂರು ಪೋಲಿಸ್ ಠಾಣಾ ವ್ಯಾಪ್ತಿಯ ಚೋಳಸಂದ್ರ ಗ್ರಾಮದ ಇಬ್ಬರು ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ಮಧ್ಯಾಹ್ನ ಸುಮಾರು ೧ ಗಂಟೆಯ ಸಮಯದಲ್ಲಿ ಜರುಗಿದೆ.
ಚೋಳಸಂದ್ರ ಗ್ರಾಮದ ಗಂಗಾಧರ ಎಂಬುವರ ಪುತ್ರಿ ರಶ್ಮಿ(೨೩) ಹಾಗೂ ಅದೇ ಗ್ರಾಮದ ನಿರಂಜನ್ ಕುಮಾರ್ ಎಂಬುವರ ಪುತ್ರಿ ಇಂಚರ(೭) ಎಂಬುವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಇವರಿಬ್ಬರು ಚೋಳಸಂದ್ರ ಗ್ರಾಮದ ಪಕ್ಕದಲ್ಲಿರುವ ಯಲಾದಹಳ್ಳಿ ಗ್ರಾಮದ ಕೆರೆಗೆ ಬಟ್ಟೆ ಒಗೆಯಲು ತೆರಳಿದಾಗ ಇಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಶವಗಳನ್ನು ಕೆರೆಯಿಂದ ಹೊರಗೆ ತೆಗೆದು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಈ ಸಂಬಂಧ ಬೆಳ್ಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ನಾಗಯ್ಯ