ರಾಜ್ಯ

ಚಾಮರಾಜನಗರ: ಕಾರ್ ಮೇಲೆ ಲಾರಿ ಉರುಳಿ ಬಿದ್ದು ಮೂವರು ಪ್ರವಾಸಿಗರು ಸಾವು, 8 ಮಂದಿಗೆ ಗಾಯ

Lingaraj Badiger

ಚಾಮರಾಜನಗರ: ಪಟ್ಟಣದ ಹೊರವಲಯದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಲಾರಿಯೊಂದು ಉರುಳಿಬಿದ್ದು, ಇಬ್ಬರು ಮಕ್ಕಳು ಸೇರಿದಂತೆ ಮೂವರು ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ನತದೃಷ್ಟರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಳ್ಳಿಯ ನಿವಾಸಿಗಳಾಗಿದ್ದು, ತಮಿಳುನಾಡು ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಮೃತರನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕುಲ್ಲರಗಿ ಗ್ರಾಮದ ಸಿದ್ದರಾಮ(40), ಸಂಕೇತ್ ಕುಮಾರ್ (4) ಮತ್ತು ಲಕ್ಷ್ಮೀಕಾಂತ್ (13) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಲ್ಲರಗಿ ಗ್ರಾಮದ 15 ಜನರ ತಂಡ ಒಂದೆರಡು ದಿನಗಳ ಹಿಂದೆ ಎರಡು ಕಾರುಗಳಲ್ಲಿ ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿತ್ತು. ವಾಪಸ್ ಚಾಮರಾಜನಗರ ಮತ್ತು ಮೈಸೂರು ಮೂಲಕ ತಮ್ಮ ಊರಿಗೆ ಬರುತ್ತಿದ್ದಾಗ ಒಂದು ಕಾರಿನಲ್ಲಿದ್ದವರು ಎಳೆ ನೀರು ಕುಡಿಯಲು ಪಟ್ಟಣದ ಹೊರವಲಯದ ಸೋಮವಾರಪೇಟೆ ಬಳಿ ನಿಲ್ಲಿಸಿದ್ದಾರೆ. 

ಕಾರು ಇಳಿದು ಕೆಲವರು ಎಳೆ ನೀರು ಕುಡಿಯುತ್ತಿದ್ದ ವೇಳೆ ಮತ್ತು ಕೆಲವರು ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ಜೋಳದ ಮೂಟೆಗಳನ್ನು ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರಿನ ಮೇಲೆ ಉರುಳಿ ಬಿದ್ದಿದೆ. ಈ ದುರಂತ ಸಂಭವಿಸಿದಾಗಿ ಮತ್ತೊಂದು ಕಾರು ಸ್ವಲ್ಪ ದೂರದಲ್ಲಿ ನಿಂತಿತ್ತು ಎಂದು ಹೇಳಲಾಗಿದೆ.
 

SCROLL FOR NEXT