ರಾಜ್ಯ

ಮಂಡ್ಯದಲ್ಲಿ ಜಲಸಮಾಧಿ ಸಂತ್ರಸ್ಥರಿಗೆ 22 ಲಕ್ಷ ರೂ. ಪರಿಹಾರ: ಸಿಎಂ ಯಡಿಯೂರಪ್ಪ ಘೋಷಣೆ

Srinivasamurthy VN

ಬೆಂಗಳೂರು: ಮಂಡ್ಯದಲ್ಲಿ ಜಲಸಮಾಧಿಯಾದ ಏಳು ಮಂದಿಗೆ 22 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಬಿ.ಎಸ್​ ಯಡಿಯೂರಪ್ಪ ಇಂದು ಘೋಷಿಸಿದ್ದಾರೆ. 

ಇಂದು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಮಂಡ್ಯದ ವಿವಿಧ ಸ್ಥಳಗಳಲ್ಲಿ ಯಾವುದೋ ಕಾರಣಕ್ಕೆ ನೀರಿನಲ್ಲಿ ಮುಳುಗಿ ಜಲಸಮಾಧಿಯಾದವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೇ ಇಷ್ಟು ಮೊತ್ತ ನೀಡುವಂತೆ ಯಡಿಯೂರಪ್ಪ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. 

ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿಯ ಶ್ರೀಮತಿ ಗೀತಾ, ಸವಿತಾ ಹಾಗೂ ಸೌಮ್ಯ ಎಂಬುವರಿಗೆ ತಲಾ 5 ಲಕ್ಷ ರೂ ನೀಡಲಾಗುವುದು. ಇದೇ ತಾಲೂಕಿನ ಚೋಳಸಂದ್ರ ಗ್ರಾಮದ ರಶ್ಮಿ ಮತ್ತು ಇಂಚರಾ, ಕೆ.ಆರ್​ ಪೇಟೆಯ ಅಭಿಷೇಕ್ ಮತ್ತು ಕುಮಾರ್ ಎಂಬಾತನಿಗೆ ತಲಾ 2 ಲಕ್ಷ ರೂ. ಪರಿಹಾರ ತಮ್ಮ ನಿಧಿಯಿಂದ ತುರ್ತಾಗಿ ನೀಡಿ ಎಂದು ಸಿಎಂ ಸೂಚನೆ ನೀಡಿದ್ಧಾರೆ ಎನ್ನಲಾಗಿದೆ.

ಇನ್ನು ಮಂಡ್ಯದಲ್ಲಿ ನಡೆದ 3 ಪ್ರತ್ಯೇಕ ಕೆರೆ ದುರಂತ ಪ್ರಕರಣಗಳಲ್ಲಿ 7 ಮಂದಿ ಜಲಸಮಾಧಿಯಾಗಿದ್ದರು. ನಾಗಮಂಗಲ ತಾಲೂಕಿನ 7 ಜನರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ನಾಗಮಂಗಲ ತಾಲೂಕಿನ ಬೀರನಹಳ್ಳಿಯಲ್ಲಿ ನಡೆದ ಕೆರೆ ದುರಂತ ಪ್ರಕರಣದಲ್ಲಿ ಒಂದೇ ಕುಟುಂಬದ ಗೀತಾ (40) ಸವಿತಾ (19) ಸೌಮ್ಯ (14) ಎಂಬ ಮೂವರು ಬಟ್ಟೆ ತೊಳೆಯುವ ಸಂಧರ್ಭದಲ್ಲಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅದೇ ತಾಲೂಕಿನ ಯಲದಹಳ್ಳಿ‌ ಗ್ರಾಮದಲ್ಲಿ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಯುವತಿ ರಶ್ಮಿ (19) ಮತ್ತು ಬಾಲಕಿ ರಶ್ಮಿ (7) ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದರು. ಇನ್ನು ಮತ್ತೊಂದು ಪ್ರಕರಣದಲ್ಲಿ ಕೆ.ಆರ್. ಪೇಟೆ‌ ತಾಲೂಕಿನ ಉರಳಿ ಗಂಗನಹಳ್ಳಿ ಗ್ರಾಮದಲ್ಲಿ ಹಸು ತೊಳೆಯಲು ಹೋಗಿದ್ದ ಅಭಿಷೇಕ್ (15) ಹಾಗೂ ಕುಮಾರ್ (27) ಎಂಬ ಇಬ್ಬರು ಯುವಕರು ಸಾವನ್ನಪ್ಪಿದ್ದರು.

ಉರುಳಿ ಗಂಗನಹಳ್ಳಿಯಲ್ಲಿ ಸಾವೀಗೀಡಾದ ಇಬ್ಬರು ಯುವಕರು ಸಹ ನಾಗಮಂಗಲ ತಾಲೂಕಿನ ಆದಿಹಳ್ಳಿ ಗ್ರಾಮದವರಾಗಿದ್ದು, ಉರುಳಿಗಂಗನಹಳ್ಳಿಯ ಅಜ್ಜಿ ಮನೆಗೆ ಕಾರಹುಣ್ಣಿಮೆ ಹಬ್ಬಕ್ಕೆಂದು ಬಂದಿದ್ದರು. ಒಂದೇ ದಿನ‌ ಮೂರು ಕಡೆ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಐವರು ಹೆಣ್ಣು ಮತ್ತು ಇಬ್ಬರು ಪುರುಷರು ಸೇರಿ‌7 ಜನರು ಜಲಕಂಟಕಕ್ಕೆ ಬಲಿಯಾಗಿದ್ದರು. 

SCROLL FOR NEXT