ರಾಜ್ಯ

ಮಹದಾಯಿ ವಿವಾದ: ಕರ್ನಾಟಕದ ವಿರುದ್ಧ ಆರೋಪ ಮಾಡುತ್ತಿರುವ ಗೋವಾಗೆ ತಿರುಗೇಟು ನೀಡಲು ರಾಜ್ಯ ಸಜ್ಜು

Manjula VN

ಅನುಮತಿ ಇಲ್ಲದೆಯೇ ಕರ್ನಾಟಕ ಕಾಮಗಾರಿ ನಡೆಸುತ್ತಿದೆ ಎಂಬ ಗೋವಾ ತಕರಾರಿಗೆ ನಾಳಿ ಸುಪ್ರೀಂನಲ್ಲಿ ರಾಜ್ಯ ತಿರುಗೇಟು


ಬೆಂಗಳೂರು: ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಗೋವಾ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ಸೋಮವಾರ ವಿಚಾರಣೆಗೆ ಬರಲಿದ್ದು, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅನುಮತಿ ಿಲ್ಲದಯೇ ಯಾವುದೇ ಕಾಮಗಾರಿ ಮಾಡಿಲ್ಲ ಎಂದು ವಾದ ಮಂಡಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. 

ಮಹದಾಯಿ ನ್ಯಾಯಾಧೀಕರಣ ಅಂತಿಮ ತೀರ್ಪನಂತೆ ಸರ್ಕಾರಿ ಅಧಿಸೂಚನೆ ಹೊರಡಿಸಲು ಸುಪ್ರೀಂಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತು. ಇದರಂತೆ ಕೇಂದ್ರ ಸರ್ಕಾರವು ಗುರುವಾರ ಅಧಿಸೂಚನೆ ಹೊರಡಿಸಿ ರಾಜ್ಯದ ಪಾಲಿನ ನೀರನ್ನು ಬಳಸಿಕೊಂಡು ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿದೆ. 

ಈ ನಡುವೆ ಮೂರೂ ರಾಜ್ಯಗಳು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನ ಉಲ್ಲಂಘಿಸಿ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಅನುಮತಿ ಇಲ್ಲದೆಯೇ ಮಹದಾಯಿ ಕಾಮಗಾರಿ ನಡೆಸಿದೆ ಎಂದು ಗೋವಾ ಸರ್ಕಾರ ತಕರಾರು ತೆಗೆದಿದೆ. ಈ ಸಂಬಂಧ ವಿಶೇಷ ಮೇಲ್ಮನವಿ ಅರ್ಜಿಯು ನಾಳೆ ವಿಚಾರಣೆಗೆ ಬರಲಿದೆ. 

ಸೋಮವಾರ ರಾಜ್ಯ ಸರ್ಕಾರದ ಪರ ವಾದ ಮಂಡಿಸಲು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ನೇತೃತ್ವದ ವಕೀಲರ ತಂಡ ಶನಿವಾರ ಸಂಜೆ ದೆಹಲಿಗೆ ತೆರಳಿದೆ. ವಿಚಾರಣೆಗೆ ಮೊದಲು ಅಂತಿಮ ಸಿದ್ಧತೆ ಸಭೆ ನಡೆಸಿ, ರಾಜ್ಯ ಸರ್ಕಾರವು ಕೇಂದ್ರದ ಅನುಮತಿ ಇಲ್ಲದೆ ಯಾವುದೇ ಕಾಮಗಾರಿ ನಡೆಸಿಲ್ಲ. ಈ ವಿಚಾರದಲ್ಲಿ ಗೋವಾ ಅನಗತ್ಯ ತಕರಾರು ತೆಗೆಯುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ. 

SCROLL FOR NEXT