ರಾಜ್ಯ

ಚಿತ್ರದುರ್ಗ: ಮೊಮ್ಮಗನಿಗೆ ಆಸ್ತಿ ಬರಿತೀನಿ ಅಂದ ತಂದೆ, ಅಣ್ಣನ ಮಗನನ್ನೇ ತೊಟ್ಟಿಯಲ್ಲಿ ಮುಳುಗಿಸಿ‌ ಕೊಂದ ಚಿಕ್ಕಪ್ಪ!

Vishwanath S

ಚಿತ್ರದುರ್ಗ: ಆಸ್ತಿ ಆಸೆಗಾಗಿ ಚಿಕ್ಕಪ್ಪನೇ ಏಳು ವರ್ಷದ ತನ್ನ ಅಣ್ಣನ ಮಗನನ್ನೇ‌ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಏಳು ವರ್ಷದ  ಗೋವಿಂದ್ ಎಂಬ ಬಾಲಕನನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಉಸಿರುಗಟ್ಟಿಸಿ  ಸಾಯಿಸಿದ ಬಳಿಕ ಮೃತದೇಹವನ್ನು ಹಳ್ಳಕ್ಕೆ ಎಸೆದಿರುವ ಘಟನೆ ಜಿಲ್ಲೆಯ ಚಳ್ಳಕೆರೆ  ತಾಲೂಕಿನ ಬೋಸೇದೇವರಹಟ್ಟಿ ಗ್ರಾಮದಲ್ಲಿ ವರದಿ ಆಗಿದೆ.

ಗೋವಿಂದ್ ನನ್ನು ಚಿಕ್ಕಪ್ಪ ಚಿರಂಜೀವಿ, ಪಾರಿವಾಳ ಹಿಡಿದು ಕೊಡುವ ಆಸೆ ತೋರಿಸಿ ಕರೆದೊಯ್ದು, ನೀರಿನ  ತೊಟ್ಟಿಯಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಸಾಯಿಸಿ ಬಳಿಕ ಗೋಣಿ ಚೀಲದಲ್ಲಿ ಮೃತ ದೇಹವನ್ನು ಕಟ್ಟಿ ಗ್ರಾಮದ ಹೊರ ವಲಯದ ಹಳ್ಳದಲ್ಲಿ ಎಸೆದಿದ್ದಾನೆ ಎನ್ನಲಾಗಿದೆ.

ಯಾವುದೋ ಕೋಪದಲ್ಲಿ, ನಿಮಗೆ  ಆಸ್ತಿ ಕೊಡುವುದಿಲ್ಲ, ನನ್ನ ಮೊಮ್ಮಗ ಗೋವಿಂದನ ಹೆಸರಿಗೆ ಬರೆಯುತ್ತೇನೆ ಎಂದು ಮಕ್ಕಳಾದ ರಂಗಸ್ವಾಮಿ, ಚಿರಂಜೀವಿ ಅವರಿಗೆ ಹೇಳಿದ್ದೆ. ಹೀಗಾಗಿ ಆಸ್ತಿ ಕೈ ತಪ್ಪುತ್ತದೆ ಎಂಬ ಆತಂಕದಿಂದ ಗೋವಿಂದನ್  ಮಗನನ್ನು ಚಿರಂಜೀವಿ ಕೊಲೆ  ಮಾಡಿದ್ದಾನೆ ಎಂದು ಆರೋಪಿಯ ತಂದೆ ರಂಗಸ್ವಾಮಿ ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಚಿರಂಜೀವಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

SCROLL FOR NEXT