ಖಾನಾಪುರ: ಬೆಳಗಾವಿ-ಲೋಂಡಾ ರೈಲು ಮಾರ್ಗದಲ್ಲಿ ಚಲಿಸುತ್ತಿದ್ದ ರೈಲು ಅಪ್ಪಳಿಸಿದ ಪರಿಣಾಮ ಎರಡು ಕಾಡುಕೋಣಗಳು ದುರ್ಮರಣವನ್ನಪ್ಪಿರುವ ಘಟನೆ ಖಾನಾಪುರದ ರೈಲು ನಿಲ್ದಾಣದ ಬಳಿಯಿರುವ ಶೇಡಗಾಳಿ ಗ್ರಾಮದಲ್ಲಿ ನಡೆದಿದೆ.
ರೈಲು ಬರುತ್ತಿದ್ದ ಸಂದರ್ಭದಲ್ಲಿ ಕಾಡುಕೋಣಗಲು ಪ್ರಯಾಣಿಕರು ಹಳಿಯ ಬಳಿ ಬಿಸಾಡಿದ್ದ ಆಹಾರವನ್ನು ಸೇವಿಸುತ್ತಿದ್ದ ವೇಳೆ ರೈಲು ಅಪ್ಪಳಿಸಿದೆ. ಪರಿಣಾಮ 9 ವರ್ಷದ ಹೆಣ್ಣು ಮತ್ತು ಒಂದೂವರೆ ವರ್ಷದ ಗಂಡು ಕಾಡುಕೋಣಗಳು ಮೃತಪಟ್ಟಿವೆ ಎಂದು ವರದಿಗಳು ತಿಳಿಸಿವೆ.
ಶೇಡೆಗಾಳಿ ಅರಣ್ಯ ಸರ್ವೇ ನ.4ರಲ್ಲಿ ಈ ಘಟನೆ ನಡೆದಿದ್ದು, ಇದೂವರೆಗೂ ತಾಲೂಕಿನ ಅರಣ್ಯದಲ್ಲಿ ಹಾದುಹೋಗಿರುವ ರೈಲು ಮಾರ್ಗದಲ್ಲಿ ರೈಲು ಅಪ್ಪಳಿಸಿದ ಒಂದು ಕಾಡನೆ, 20ಕ್ಕೂ ಹೆಚ್ಚು ಕಾಡುಕೋಣಗಳು ಮತ್ತು ಅನೇಕ ವನ್ಯಜೀವಿಗಳು ಬಲಿಯಾಗಿರುವುದು ವನ್ಯಜೀವಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಆತಂಕದ ವಿಚಾರವಾಗಿದೆ.
ರೈಲಿನಲ್ಲಿ ಪ್ರಯಾಣಿಸಿರುವ ಜನರು ತಾವು ತಿಂದು ಉಳಿದ ಆಹಾರ ಪದಾರ್ಥಗಲನ್ನು ಕಿಟಕಿಗಳ ಮೂಲಕ ಹಳಿಗಳ ಪಕ್ಕ ಎಸೆಯುವ ಕಾರಣ ಆಹಾರದ ವಾಸನೆ ಹಿಡಿದು ರೈಲು ಹಳಿಗಳ ಬಳಿ ಬರುವ ವನ್ಯಜೀವಿಗಳು ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿವೆ.